ಆಗಸ್ಟ್ 18ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಅತ್ಯಂತ ಹೆಚ್ಚು ಮತಗಳನ್ನು ಒಟ್ಟು ಮಾಡಲಿರುವ ತಮ್ಮ ಜಿಲ್ಲಾ ಕಾರ್ಯದರ್ಶಿಗಳಿಗೆ ತಮಿಳ್ನಾಡಿನ ಆಡಳಿತಾರೂಢ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟವು ಚಿನ್ನದ ಉಡುಗೊರೆಯ ಆಹ್ವಾನ ನೀಡಿದೆ.
ಅತಿಹೆಚ್ಚು ಮತವನ್ನು ಕಲೆ ಹಾಕುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಚಿನ್ನದ ಬಹುಮಾನವನ್ನು ಗೆಲ್ಲುವುದಾಗಿ ಕಾಂಗ್ರೆಸ್ ಮುಖ್ಯಸ್ಥ ಕೆ.ವಿ. ತಂಕಬಾಲು ಹೇಳಿದ್ದಾರೆ. ತಂಕಬಾಲು ಅವರು ತೊಂಡಮುತ್ತೂರು ಕ್ಷೇತ್ರದಿಂದ ಸ್ಫರ್ಧಿಸುವ ತಮ್ಮ ಪಕ್ಷದ ಅಭ್ಯರ್ಥಿ ಎಂ.ಎನ್. ಕಂದಸಾಮಿ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಡಿಎಂಕೆ ಅಭ್ಯರ್ಥಿಯ ಪರವಾಗಿ ಅತಿಹೆಚ್ಚು ಮತಗಳನ್ನು ಸಂಗ್ರಹಿಸುವ ಜಿಲ್ಲಾ ಕಾರ್ಯದರ್ಶಿಗೆ ಚಿನ್ನದ ಸರದ ಉಡುಗೊರೆ ನೀಡುವುದಾಗಿ ಕೇಂದ್ರ ಸಚಿವ ಹಾಗೂ ದಕ್ಷಿಣ ತಮಿಳ್ನಾಡು ಜಿಲ್ಲೆಗಳ ಡಿಎಂಕೆ ಸಂಘಟನಾ ಕಾರ್ಯದರ್ಶಿ ಎಂ.ಕೆ. ಅಳಗಿರಿ ಈ ಹಿಂದೆ ಘೋಷಿಸಿದ್ದರು. ಈ ಸರವನ್ನು ತನ್ನ ಸ್ವಂತ ಹಣದಿಂದ ನೀಡುವುದಾಗಿ ಅವರು ಹೇಳಿದ್ದಾರೆ.
ತಮಿಳ್ನಾಡಿನ ಒಟ್ಟು ಐದು ವಿಧಾಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಡಿಎಂಕೆಯು ಬರ್ಗೂರು, ಇಲ್ಯಾನ್ಕುಂಡಿ ಹಾಗೂ ಕಂಬಂ ಕ್ಷೇತ್ರಗಳಿಂದ ಸ್ಫರ್ಧಿಸಿದರೆ ಅದರ ಮಿತ್ರಪಕ್ಷ ಕಾಂಗ್ರೆಸ್, ತೊಂಡಮುತ್ತೂರ್ ಹಾಗೂ ಶ್ರೀವೈಕುಂಡಂ ಸ್ಥಾನಗಳಿಂದ ಸ್ಫರ್ಧಿಸುತ್ತಿದೆ.
ಐದು ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ 67 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಮಧ್ಯೆ, ಚುನಾವಣೆಗಳು ನ್ಯಾಯಯುತವಾಗಿ ನಡೆಯುವ ಭರವಸೆ ಇಲ್ಲದ ಕಾರಣ ಎಐಎಡಿಎಂಕೆ ಹಾಗೂ ಅದರ ಮಿತ್ರ ಪಕ್ಷಗಳು ಚುನಾವಣೆಯಲ್ಲಿ ಸ್ಫರ್ಧಿಸುವುದಿಲ್ಲ ಎಂದು ಹೇಳಿವೆ.