ನಾಲ್ಕು ಸುಪ್ರೀಂಕೋರ್ಟ್ ಪೀಠಗಳನ್ನು ಸ್ಥಾಪಿಸುವಂತೆ ರಾಷ್ಟ್ರೀಯ ಕಾನೂನು ಆಯೋಗವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ನ್ಯಾಯಮೂರ್ತಿ ಎ.ಆರ್. ಲಕ್ಷ್ಮಣನ್ ನೇತೃತ್ವದ ಆಯೋಗವು ಈ ಶಿಫಾರಸ್ಸು ಮಾಡಿದ್ದು, ಕೋಲ್ಕತ್ತಾ, ಮುಂಬೈ, ಚೆನ್ನೈ ಅಥವಾ ಹೈದರಾಬಾದ್ಗಳಲ್ಲಿ ಉದ್ದೇಶಿತ ಪೀಠಗಳನ್ನು ಸ್ಥಾಪಿಸುವಂತೆ ತನ್ನ ವರದಿಯಲ್ಲಿ ಹೇಳಿದೆ.
ದೆಹಲಿಯಲ್ಲಿ ಈಗಿರುವ ಪೀಠದ ಜತೆಗೆ ಸಂವಿಧಾನಕ್ಕೆ ಸಂಬಂಧಿಸಿದ ವಿಷಯಗಳ ವಿಚಾರಣೆ ನಡೆಸಲು ಪ್ರತ್ಯೇಕ ಪೀಠದ ಅಗತ್ಯವಿದೆ ಎಂದು ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ಹೇಳಲಾಗಿದೆ.
ಸುಪ್ರೀಂಕೋರ್ಟ್ ಮುಂದೆ ಬಾಕಿ ಉಳಿದಿರುವ ಮೊಕದ್ದಮೆಗಳ ಸಂಖ್ಯೆ ಹಾಗೂ ನ್ಯಾಯಕೋರಿ ಕೋರ್ಟಿಗೆ ಬರುವ ಕಕ್ಷಿದಾರರ ಖರ್ಚುವೆಚ್ಚ ಹಾಗೂ ಭೌಗೋಳಿಕ ದೂರವನ್ನು ಗಮನದಲ್ಲಿರಿಸಿಕೊಂಡು ಸುಪ್ರೀಂಕೋರ್ಟ್ ಪೀಠಗಳ ಸ್ಥಾಪನೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ಆಯೋಗ ಹೇಳಿದೆ. ಈ ಪೀಠಗಳ ಸ್ಥಾಪನೆಯಿಂದ ಜನರ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದು ಆಯೋಗ ಅಭಿಪ್ರಾಯಿಸಿದೆ.
ಪ್ರಸ್ತುತ ಸುಪ್ರೀಂಕೋರ್ಟಿನಲ್ಲಿ 55 ಸಾವಿರ ಪ್ರಕರಣಗಳಿದ್ದು 98 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈ ಉದ್ದೇಶಿತ ಪೀಠಗಳು ತನ್ನ ವ್ಯಾಪ್ತಿಗೆ ಬರುವ ಹೈಕೋರ್ಟ್ ತೀರ್ಪುಗಳನ್ನು ಪ್ರಶ್ನಿಸಿ ಸಲ್ಲಿಸಲಾಗುವ ಮೇಲ್ಮನವಿ ಅರ್ಜಿಗಳನ್ನು ಪರಿಶೀಲಿಸಿ ಅಂತಿಮ ತೀರ್ಪು ನೀಡುವ ಅಧಿಕಾರ ಹೊಂದಬೇಕು ಮತ್ತು ಕಕ್ಷಿದಾರನಿಗೆ ಇದೇ ಕೊನೆಯ ಅವಕಾಶ ಆಗಬೇಕು ಎಂದು ಆಯೋಗ ಹೇಳಿದೆ.