ಇಲ್ಲಿನ ಸಿಟಿ ಸಿವಿಲ್ ಆಸ್ಪತ್ರೆಯಲ್ಲಿ 43ರ ಹರೆಯದ ಅನಿವಾಸಿ ಭಾರತೀಯರೊಬ್ಬರು ಭಾನುವಾರ ನಸುಕಿನಲ್ಲಿ ಸಾವನ್ನಪ್ಪುವುದರೊಂದಿಗೆ ರಾಷ್ಟ್ರದಲ್ಲಿ ಹಂದಿಜ್ವರ ರೋಗದಿಂದ ಸತ್ತವರ ಸಂಖ್ಯೆ ನಾಲ್ಕಕ್ಕೇರಿದೆ.
ನಸುಕಿಗೂ ಮುಂಚಿನ ವೇಳೆಗೆ ಸುಮಾರು ಒಂದೂವರೆ ಗಂಟೆಗೆ ಪ್ರವೀಣ್ ಪಟೇಲ್ ಎಂಬ ಉದ್ಯಮಿ ಸಾವನ್ನಪ್ಪಿದ್ದಾರೆ ಎಂದು ಗುಜರಾತಿನ ರಾಜ್ಯ ಆರೋಗ್ಯ ಕಾರ್ಯದರ್ಶಿ ರವಿ ಸಕ್ಸೇನ ತಿಳಿಸಿದ್ದಾರೆ. ಇದು ಹಂದಿಜ್ವರದಿಂದಾಗಿ ರಾಜ್ಯದಲ್ಲಿ ಸಂಭವಿಸುತ್ತಿರುವ ಮೊದಲ ಸಾವಾಗಿದೆ.
ಪಟೇಲ್ ಅವರನ್ನು ಅತ್ಯಂತ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಬಲಭಾಗ ಶ್ವಾಸಕೋಶ ತುಂಬ ಹಾನಿಯಾಗಿತ್ತು ಎಂದು ಸಕ್ಸೇನ ಹೇಳಿದ್ದಾರೆ.
ಪಟೇಲ್ ಅವರು ಅಟ್ಲಾಂಟದಿಂದ ಜುಲೈ 31ರಂದು ಹಿಂದಿರುಗಿದ್ದರು. ಅವರನ್ನು ನ್ಯೂಮೋನಿಯಾಕ್ಕಾಗಿ ಖಾಸಗಿ ಆಸ್ಪತ್ರೆಗೆ ದಾಖಸಲಿಸಾಗಿತ್ತು. ಇದು ಸಹಜವಾದ ಫ್ಲೂ ಅಲ್ಲಎಂಬುದು ತಿಳಿಯುತ್ತಲೇ ಅಲ್ಲಿನ ವೈದ್ಯರು ಅವರನ್ನು ಸಿಟಿ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿ ಅವರಿಗೆ ಹಂದಿಜ್ವರದ ಸೋಂಕು ತಗುಲಿರುವುದು ದೃಢವಾಗಿತ್ತು.
ಪಟೇಲ್ ಅವರ ಪತ್ನಿಯೂ ಸೋಂಕಿನಿಂದ ಬಳಲುತ್ತಿದ್ದು ಅವರಿಗೂ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದುವರೆಗೆ ರಾಜ್ಯದಲ್ಲಿ ಒಟ್ಟು 10 ಮಂದಿಗೆ ಎಚ್1ಎನ್1 ಸೋಂಕು ಪತ್ತೆಯಾಗಿದೆ. ರಾಷ್ಟ್ರದಲ್ಲಿ ಒಟ್ಟು ನಾಲ್ಕು ಮಂದಿ ರೋಗಕ್ಕೆ ತುತ್ತಾಗಿದ್ದು, 782 ಮಂದಿಗೆ ಸೋಂಕು ತಗುಲಿದೆ.
ಶನಿವಾರ ಮುಂಬೈನ 53ರ ಹರೆಯದ ಫಹ್ಮಿದಾ ಪಾನ್ವಾಲ ಹಾಗೂ ಪುಣೆಯ 42ರ ಹರೆಯದ ಸಂಜಯ್ ತುಕಾರಾಂ ಕೊಕ್ರೆ ಅವರು ಸಾವನ್ನಪ್ಪಿದ್ದಾರೆ. ಆಗಸ್ಟ್ 3ರಂದು 14ರ ಹರೆಯದ ಶಾಲಾಬಾಲಕಿ ರೀದಾ ಶೇಕ್ ಎಂಬಾಕೆ ಪ್ರಥಮವಾಗಿ ರಾಷ್ಟ್ರದಲ್ಲಿ ಈ ರೋಗಕ್ಕೆ ಬಲಿಯಾಗಿದ್ದಳು.