ಸ್ವೈನ್ ಫ್ಲೂಗೆ ರಾಷ್ಟ್ರದಲ್ಲಿ ನಾಲ್ಕು ಮಂದಿ ಬಲಿಯಾಗಿರುವ ಹಿನ್ನೆಲೆಯಲ್ಲಿ, ಭಯಭೀತರಾಗಿರುವ ಜನರಿಗೆ 'ಸರಿಯಾದ ಮಾಹಿತಿ' ನೀಡಲು ವೈದ್ಯರ ಸಮಿತಿಯನ್ನು ರೂಪಿಸಲು ಪ್ರಧಾನಿ ಮನಮೋಹನ್ ಸಿಂಗ್ ಅವರು ಆರೋಗ್ಯ ಸಚಿವ ಗುಲಾಂ ನಬಿ ಅಜಾದ್ ಅವರಿಗೆ ಸೂಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಈ ಸಮಿತಿಯು ಮಾಧ್ಯಮಗಳಿಗೂ ಸರಿಯಾದ ಮಾಹಿತಿ ನೀಡಬೇಕು ಎಂದು ಹೇಳಿರುವ ಪ್ರಧಾನಿ ಈ ಮೂಲಕ ತಪ್ಪು ಕಲ್ಪನೆಗಳನ್ನು ತಡೆಯಬಹುದು ಎಂದು ಹೇಳಿದ್ದಾರೆ.
ಎಚ್1ಎನ್1 ವೈರಸ್ ಅನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಲು ಅಜಾದ್ ಭಾನುವಾರ ಮುಂಜಾನೆ ಪ್ರಧಾನಿಯವರಿಗೆ ದೂರವಾಣಿ ಕರೆ ನೀಡಿದ ವೇಳೆ ಅವರು ಈ ಸೂಚನೆ ನೀಡಿದ್ದಾರೆ.
ಸಾಕಷ್ಟು ತಮಿಫ್ಲೂ ಔಷಧಿ ಇರುವುದಾಗಿ ಮತ್ತು ಸೋಂಕು ಪೀಡಿತರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಸಚಿವರು ಪ್ರಧಾನಿಯವರಿಗೆ ತಿಳಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.