ಮುಂಬೈ: ರಾಷ್ಟ್ರದಲ್ಲಿ ಎಚ್1ಎನ್1 ಸೋಂಕು ನಿಯಂತ್ರಣ ತಪ್ಪಿ ಹಬ್ಬುತ್ತಿದ್ದು, ಈ ಸೋಂಕು ಪೀಡಿತರಾಗಿದ್ದ ಪುಣೆಯ ವೈದ್ಯ ಹಾಗೂ ಚೆನ್ನೈನ ಬಾಲಕ ಸೋಮವಾರ ಮುಂಜಾನೆ ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ. ಇದರಿಂದ ರಾಷ್ಟ್ರದಲ್ಲಿ ಈ ಮಹಾಮಾರಿಗೆ ಬಲಿಯಾಗಿರುವವರ ಒಟ್ಟು ಸಂಖ್ಯೆ ಆರಕ್ಕೇರಿದೆ.
ಆಯುರ್ವೇದಿಕ್ ವೈದ್ಯರಾಗಿದ್ದ 36ರ ಹರೆಯದ ಬಾಬಸಾಹೇಬ್ ಮಾನೆ ಅವರನ್ನು ಗಂಭೀರ ಸ್ಥಿತಿಯಲ್ಲಿ ಶನಿವಾರ ಸಸೂನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ.
ಚೆನ್ನೈನ ನಾಲ್ಕರ ಹರೆಯದ ಸಂಜಯ್ ಎಂಬ ಬಾಲಕನೂ ಸೋಮವಾರ ಮುಂಜಾನೆ ಈ ಮಹಾಮಾರಿಗೆ ಬಲಿಯಾಗಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಈತನನ್ನು ಚೇತ್ಪೇಟೆಯ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತ ಈ ದಾರುಣ ಸಾವು ಕಂಡಿದ್ದಾನೆ.
ಭಾನುವಾರ ಗುಜರಾತಿನಲ್ಲಿ ಅನಿವಾಸಿ ಭಾರತೀಯ ಉದ್ಯಮಿಯೊಬ್ಬರು ಸಾವನ್ನಪ್ಪಿದ್ದರು. ಪ್ರವೀಣ್ ಪಟೇಲ್(43) ಎಂಬ ಹೆಸರಿನ ಉದ್ಯಮಿ ಅಟ್ಲಾಂಟದಿಂದ ಜುಲೈ 31ರಂದು ಹಿಂದಿರುಗಿದ್ದರು. ಅವರನ್ನು ನ್ಯೂಮೋನಿಯಾಕ್ಕಾಗಿ ಖಾಸಗಿ ಆಸ್ಪತ್ರೆಗೆ ದಾಖಸಲಿಸಾಗಿತ್ತು. ಇದು ಸಹಜವಾದ ಫ್ಲೂ ಅಲ್ಲಎಂಬುದು ತಿಳಿಯುತ್ತಲೇ ಅಲ್ಲಿನ ವೈದ್ಯರು ಅವರನ್ನು ಸಿಟಿ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿ ಅವರಿಗೆ ಹಂದಿಜ್ವರದ ಸೋಂಕು ತಗುಲಿರುವುದು ದೃಢವಾಗಿತ್ತು.
ಪಟೇಲ್ ಅವರ ಪತ್ನಿಯೂ ಸೋಂಕಿನಿಂದ ಬಳಲುತ್ತಿದ್ದು ಅವರಿಗೂ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಅವರ ಪತಿ ಸಾವನ್ನಪ್ಪಿರುವ ವಿಚಾರ ಅವರಿಗಿನ್ನೂ ತಿಳಿಸಲಾಗಿಲ್ಲ ಎಂದು ಮೂಲಗಳು ಹೇಳಿವೆ.
ಪುಣೆಯಲ್ಲಿ ರಿದಾ ಶೇಖ್ ಎಂಬ ಮುಂಬೈಬಾಲಕಿಯ ಮರಣಾನಂತರ ಮುಂಬೈಯಲ್ಲಿ ಶನಿವಾರ ಮುಂಬೈನ 53ರ ಹರೆಯದ ಫಹ್ಮಿದಾ ಪಾನ್ವಾಲ ಹಾಗೂ ಪುಣೆಯ 42ರ ಹರೆಯದ ಸಂಜಯ್ ತುಕಾರಾಂ ಕೊಕ್ರೆ ಅವರು ಸಾವನ್ನಪ್ಪಿದ್ದರು. ಆಗಸ್ಟ್ 3ರಂದು 14ರ ಹರೆಯದ ಶಾಲಾಬಾಲಕಿ ರೀದಾ ಶೇಕ್ ಎಂಬಾಕೆ ಪ್ರಥಮವಾಗಿ ರಾಷ್ಟ್ರದಲ್ಲಿ ಈ ರೋಗಕ್ಕೆ ಬಲಿಯಾಗಿದ್ದಳು.
ಸೋಂಕುಪೀಡಿತರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದ್ದು, ಭಾನುವಾರ 42 ಹೊಸ ಪ್ರಕರಣಗಳು ದಾಖಲಾಗಿವೆ. ಪುಣೆಯು ಈ ರೋಗದ ಕೇಂದ್ರಸ್ಥಾನ ಎಂಬಂತಾಗಿದೆ.