ಕಾಲ್ ಸೆಂಟರ್ ಉದ್ಯೋಗಿಯೊಬ್ಬ ತನ್ನ ಮಹಿಳಾ ಸಹೋದ್ಯೋಗಿಗೆ ಮತ್ತು ಬರಿಸುವ ಔಷಧಿ ನೀಡಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಅತನನ್ನು ಬಂಧಿಸಲಾಗಿದೆ. ಪ್ರಶಾಂತ್ ರಾಣಾ ಎಂಬ 28ರ ಹರೆಯದ ರೋಹಿಣಿ ಎಂಬಲ್ಲಿನ ನಿವಾಸಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರ್ಗಾಂವ್ನ ಬಿಪಿಓ ಒಂದರಲ್ಲಿ ಟೀಮ್ ಲೀಡರ್ ಆಗಿರುವ ಈತ ತನ್ನ 27ರ ಹರೆಯದ ಸಹೋದ್ಯೋಗಿಯ ಮೇಲೆ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಈ ಇಬ್ಬರು ಒಂದೇ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಶುಕ್ರವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಬಲಿಪಶು ಯುವತಿಯು ಪಶ್ಚಿಮ ದೆಹಲಿಯ ಪಶ್ಚಿಮ ವಿಹಾರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಳು. ಈಕೆಯನ್ನು ಆಫೀಸ್ ಕ್ಯಾಬ್ ಶುಕ್ರವಾರ ರಾತ್ರಿ ಎಂಟು ಗಂಟೆ ಸುಮಾರಿಕೆ ಆಕೆಯ ಮನೆಯ ಸಮೀಪ ಇಳಿಸಿತ್ತು. ಕ್ಯಾಬಿನಲ್ಲಿ ಇದ್ದ ಆರೋಪಿಯೂ ಅದೇ ಜಾಗದಲ್ಲಿ ಇಳಿದಿದ್ದ.
"ಆರೋಪಿಯೂ ಸಹ ಕ್ಯಾಬಿನಿಂದ ಇಳಿದಿದ್ದು, ಆಕೆಗೆ ಪಾನೀಯವನ್ನು ನೀಡಿದ್ದು, ಇದರಲ್ಲಿ ಮತ್ತು ಬರಿಸುವ ಔಷಧಿಯನ್ನು ನೀಡಿದ" ಎಂಬುದಾಗಿ ಬಲಿಪಶು ದೂರಿನಲ್ಲಿ ತಿಳಿಸಿರುವುದಾಗಿ ಪಶ್ಚಿಮ ಡಿಸಿಪಿ ಶರದ್ ಅಗರ್ವಾಲ್ ಹೇಳಿದ್ದಾರೆ. ಪಾನೀಯ ಸೇವಿಸಿದ ಬಳಿಕ ತಾನು ಪ್ರಜ್ಞೆ ಕಳೆದುಕೊಂಡಿದ್ದು, ರಾಣಾ ತನ್ನನ್ನು ಅಪರಿಚಿತ ಸ್ಥಳಕ್ಕೆ ಕರೆದೊಯ್ದು ತನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದ. ಶನಿವಾರ ಎಚ್ಚರವಾಗುತ್ತಲೇ ತಾನು ಅಪರಿಚಿತ ಸ್ಥಳದಲ್ಲಿ ಇರುವುದು ತಿಳಿದ ಯುವತಿ ಆಟೋದಲ್ಲಿ ತನ್ನ ಮನೆಗೆ ಮರಳಿದಳು ಎಂದು ದೂರಿನಲ್ಲಿ ಹೇಳಲಾಗಿದೆ.
ಭಾನುವಾರ ಆಕೆ ಪಶ್ಚಿಮ ವಿಹಾರ ಪೊಲೀಸರಿಗೆ ದೂರು ನೀಡಿದ್ದು, ವೈದ್ಯಕೀಯ ಪರೀಕ್ಷೆಯು ಆಕೆ ಲೈಂಗಿಕ ಹಲ್ಲೆಗೊಳಗಾಗಿರುವುದನ್ನು ದೃಢಪಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.