ಚೆನ್ನೈನಲ್ಲಿ ಸಾಕಷ್ಟು ಎಚ್1ಎನ್1 ಚಿಕಿತ್ಸಾ ಪರಿಕರಗಳಿಲ್ಲ!
ಚೆನ್ನೈ, ಸೋಮವಾರ, 10 ಆಗಸ್ಟ್ 2009( 10:44 IST )
ಎಚ್1ಎನ್1 ಇನ್ಫ್ಲೂಯಾಂಜ ಎಂಬ ಹೊಸ ನಾಮಾಂಕಿತ ಮಹಾಮಾರಿ ಹಂದಿಜ್ವರವು ಅತಿ ಕ್ಷಿಪ್ರವಾಗಿ ರಾಷ್ಟ್ರದಲ್ಲಿ ವ್ಯಾಪಿಸುತ್ರಿರುವಂತೆಯೇ, ಮೆಟ್ರೋಪಾಲಿಟನ್ ನಗರವಾದ ಚೆನ್ನೈಯಲ್ಲೂ ಹಬ್ಬುತ್ತಿದ್ದು, ಇಲ್ಲಿನ ನಾಲ್ಕರ ಹರೆಯದ ಬಾಲಕನೊಬ್ಬ ಸೋಮವಾರ ಮುಂಜಾನೆ ಈ ರೋಗಕ್ಕೆ ಬಲಿಯಾಗಿದ್ದಾನೆ. ಇಲ್ಲಿ ಒಟ್ಟು ಸೋಂಕು ಪೀಡಿತರ ಸಂಖ್ಯೆ ಏಳಕ್ಕೇರಿದೆ.
ರೈಲು, ವಿಮಾನ, ಬಸ್ಸುಗಳ ಮೂಲಕ ದಿನ ಒಂದರ ಲಕ್ಷಾಂತರ ಮಂದಿ ಓಡಾಡುವ ಈ ಮೆಟ್ರೋಪಾಲಿಟನ್ ನಗರದಲ್ಲಿ ಸಾಕಷ್ಟು ಚಿಕಿತ್ಸಾ ಪರಿಕರಗಳು ಲಭ್ಯವಿಲ್ಲ ಎಂಬ ಆತಂಕಕಾರಿ ವಿಚಾರ ಬಹಿರಂಗಗೊಂಡಿದೆ. ಖಾಸಗೀ ವಾಹಿನಿಯೊಂದಿಗೆ ಮಾತನಾಡಿರುವ ರಾಜ್ಯ ಆರೋಗ್ಯ ಅಧಿಕಾರಿಯೊಬ್ಬರೂ ಚಿಕಿತ್ಸಾ ಪರಿಕರಗಳ ಕೊರತೆ ಇರುವುದನ್ನು ಒಪ್ಪಿಕೊಂಡಿದ್ದಾರೆ.
ಸೋಂಕ್ ಪತ್ತೆಯ ತಪಾಸಣೆ ನಡೆಸುವ ಚೆನ್ನೈನ ಕಿಂಗ್ಸ್ ಲ್ಯಾಬ್ನಲ್ಲಿ ಪರೀಕ್ಷಾ ಪರಿಕರಗಳು ಮುಗಿದಿವೆ ಎಂದು ವರದಿಗಳು ಹೇಳಿವೆ. ಭಾನುವಾರದಿಂದಲೇ ಇಲ್ಲಿ ಕೊರತೆ ಎದುರಾಗಿದೆ.
ಸಂಜಯ್ ಬಾಲಕೃಷ್ಣನ್ ಎಂಬ ಬಾಲಕನ ಸಾವಿಗೆ ಚಿಕಿತ್ಸಾ ಪರಿಕರಗಳ ಕೊರತೆ ಕಾರಣ ಎನ್ನಾಲಾಗಿದೆ. ಇದು ಜನರಲ್ಲಿ ಭೀತಿ ಹುಟ್ಟಿಸಿದೆ. ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಅಜಾದ್, ಈ ರೋಗವನ್ನು ಎದುರಿಸಲು ರಾಷ್ಟ್ರವು ಸರ್ವ ಸನ್ನದ್ಧವಾಗಿದೆ, ಸಾಕಷ್ಟು ಔಷಧಿಗಳ ಸಂಗ್ರಹವಿದೆ ಎಂಬ ರಾಗ ಎಳೆಯುತ್ತಿರುವಂತೆಯೇ, ಇತ್ತ ರೋಗವು ರಾಷ್ಟ್ರದಲ್ಲಿ ಹತೋಟಿ ತಪ್ಪಿ ಮೀರುತ್ತಿದೆ. ಪುಣೆ, ಮುಂಬೈ, ಬೆಂಗಳೂರು, ಅಹ್ಮದಾಬಾದ್ ಮುಂತಾದ ಪ್ರಮುಖ ನಗರಗಳಲ್ಲಿ ಸೋಂಕಿನ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.
ಚೆನ್ನೈ ಬಾಲಕನ ಸಾವು ತಮಿಳ್ನಾಡಿನಲ್ಲಿ ಈ ರೋಗಕ್ಕೆ ಆಹುತಿಯಾದ ಮೊದಲ ಪ್ರಕರಣವಾಗಿದೆ. ಮೃತ ಬಾಲಕನ 11ರ ಹರೆಯದ ಸಹೋದರನಿಗೂ ಸೋಂಕು ತಗುಲಿದೆ. ಇದೀಗ ಆತ ವಾಸ್ತವ್ಯವಿದ್ದ ವೆಲಚ್ಚೇರಿಯ ಅಪಾರ್ಟ್ಮೆಂಟಿನ ಇತರರೂ ತಪಾಸಣೆಗೊಳಗಾಗಿದ್ದಾರೆ. ಆತ ತೆರಳುತ್ತಿದ್ದ ವೆಲಚ್ಚೇರಿ ಶಾಲೆಗೆ ಒಂದು ವಾರ ರಜೆ ಸಾರಲಾಗಿದೆ.
ಆಸ್ತಮಾ ರೋಗಿಯಾಗಿದ್ದ ಬಾಲಕನಲ್ಲಿ ಭೇದಿ ಕಾಣಿಸಕೊಂಡಿಸಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತ್ಪೇಟೆಯ ಮೆಹ್ತಾನಗರ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದ. ಆತ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ.
ಈ ಬಾಲಕನ ತಂದೆ ಇತ್ತೀಚೆಗೆ ಸಿಂಗಾಪುರದಿಂದ ಹಿಂತಿರುಗಿದ್ದರು ಎನ್ನಲಾಗಿದೆ.