ತಮ್ಮ ಪುತ್ರಿಯ ಪ್ರಿಯತಮನ ಜನನಾಂಗಗಳನ್ನು ಕತ್ತರಿಸಿ ಹಾಕಿದ ಮಧ್ಯಪ್ರದೇಶದ ದಂಪತಿಯ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.
ಛಾತರ್ಪುರ ಜಿಲ್ಲೆಯ ಸರವಾಯ್ ಎಂಬ ಗ್ರಾಮದ ಯುವಕ ರಾಮರಾಜ್ ಪಟೇಲ್ ಎಂಬಾತ ತನ್ನ ನೆರೆಮನೆಯಲ್ಲಿದ್ದ ಬಲರಾಮ ಠಾಕೂರ್ ಎಂಬವರ 16ರ ಹರೆಯದ ಮಗಳನ್ನು ಪ್ರೀತಿಸುತ್ತಿದ್ದ. ಒಂದು ತಿಂಗಳ ಹಿಂದೆ ಈ ಪ್ರೇಮ ಸಂಬಂಧದ ಬಗ್ಗೆ ತಿಳಿದುಕೊಂಡ ಠಾಕೂರ್, ಮಗಳಿಂದ ದೂರವಿರುವಂತೆ ಪಟೇಲ್ಗೆ ಎಚ್ಚರಿಕೆ ನೀಡಿದ್ದ. ಆದರೆ ಅವರಿಬ್ಬರ ಪ್ರೇಮ ಮುಂದುವರಿದೇ ಇತ್ತು.
ಭಾನುವಾರ ರಾತ್ರಿ ಪಟೇಲ್ ಮನೆಗೆ ತನ್ನ ಪತ್ನಿಯೊಂದಿಗೆ ತೆರಳಿದ ಠಾಕೂರ್, ಏನೋ ಕೆಲಸವಿದೆ ಎಂದು ಕರೆದುಕೊಂಡು ಹೋಗಿ, ಕೊಠಡಿಯೊಂದರಲ್ಲಿ ಕೂಡಿ ಹಾಕಿದರು. ಅಲ್ಲಿ ಪಟೇಲ್ಗೆ ಚೆನ್ನಾಗಿ ತದುಕಿ, ಜನನಾಂಗಗಳನ್ನು ಕತ್ತರಿಸಿದರು.
ತನ್ನ ಅಣ್ಣನನ್ನು ಠಾಕೂರ್ ದಂಪತಿ ಬಲವಂತವಾಗಿ ಎಳೆದುಕೊಂಡು ಹೋದರು ಎಂದು ಪಟೇಲ್ನ ತಂಗಿ ರೇಖಾ, ಅಲ್ಲೇ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ದೂರು ನೀಡಿದಳು. ಪೊಲೀಸರು ತಕ್ಷಣವೇ ಕಾರ್ಯಾಚರಣೆಗಿಳಿದು, ಠಾಕೂರ್ ಮನೆಗೆ ದಾಳಿ ಮಾಡಿ, ಪ್ರಜ್ಞಾಹೀನನಾಗಿ ಬಿದ್ದಿದ್ದ ಪಟೇಲ್ನನ್ನು ರಕ್ಷಿಸಿದರು. ಇದೀಗ ಆತನನ್ನು ಛಾತರ್ಪುರ ಆಸ್ಪತ್ರೆಗೆ ಸೇರಿಸಲಾಗಿದೆ. ಠಾಕೂರ್ನನ್ನು ಬಂಧಿಸಲಾಗಿದ್ದರೆ, ಪತ್ನಿಗಾಗಿ ಶೋಧ ನಡೆಯುತ್ತಿದೆ.