ಮುಂಬೈ ದಾಳಿ ವೇಳೆ ಜೀವಂತ ಸೆರೆಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ನ ಪ್ರಪ್ರಥಮ ಹೇಳಿಕೆ ಪಡೆದುಕೊಂಡ ಹಿರಿಯ ಪೊಲೀಸ್ ಇದೀಗ ಕೆಟ್ಟ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳದಲ್ಲಿ ಮಹಿಳೆಯೊಬ್ಬರ ಮೇಲೆ ಎಸಿಪಿ ತಾನಾಜಿ ಘಾಟೆ ಹಲ್ಲೆ ನಡೆಸಿದ್ದು ಗರ್ಭಿಣಿಯಾಗಿದ್ದ ಆ ಮಹಿಳೆಗೆ ಗರ್ಭಪಾತವಾಗಿದೆ ಎಂದು ವರದಿಯಾಗಿದೆ.
ಅಹ್ಮದ್ನಗರ್ಗೆ ಘಾಟೆ ತೆರಳಿದ್ದ ವೇಳೆಗೆ ಈ ಮಹಿಳೆ ಹಾಗೂ ಇನ್ನಿಬ್ಬರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಗುಂಡುಹಾರಿಸಿ ಗಾಯಗೊಳಿಸಿದ್ದಾರೆನ್ನಲಾಗಿದೆ. ಅಹ್ಮದ್ನಗರದ ಹೊರವಲಯದಲ್ಲಿ ಸಾಗುತ್ತಿದ್ದ ವೇಳೆ ತಮ್ಮವಾಹನವನ್ನು ಹಿಂದಿಕ್ಕಲು ಘಾಟೆಗೆ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದಿರುವ ಅವರು ಈ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
ಘಾಟೆಯ ಹಲ್ಲೆಗೊಳಗಾದ ವ್ಯಕ್ತಿಯು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತ. ಈತನ ಪತ್ನಿ ಕಲ್ಪನಾ ಗಾಯಕ್ವಾಡ್ ಗರ್ಭಿಯಾಗಿದ್ದು ಹಲ್ಲೆಯಿಂದಾಗಿ ಗರ್ಭಪಾತವಾಗಿದೆ ಎಂದು ಹೇಳಲಾಗಿದೆ. ಈ ದಂಪತಿಗಳ ಮೇಲೆ ಘಾಟೆ ಹಲ್ಲೆ ನಡೆಸುತ್ತಿದ್ದ ವೇಳೆ ಸಹಾಯಕ್ಕೆ ಸ್ಥಳೀಯರು ಬಂದಾಗ ಅವರ ಮೇಲೆ ಗುಂಡು ಹಾರಿಸಿದ್ದು ಈ ವೇಳೆ ವ್ಯಕ್ತಿಯೊಬ್ಬನಿಗೆ ಗಾಯವಾಗಿದೆ.
ಘಾಟೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರಾದರೂ ಎಫ್ಐಆರ್ ಇನ್ನೂ ದಾಖಲಾಗಿಲ್ಲ.