ಪುಣೆಯಲ್ಲಿ ಸೋಮವಾರ ರಾತ್ರಿ 35 ರ ಹರೆಯದ ಸಂಜಯ್ ತಿಲೆಕಾರ್ ಎಂಬವರು ಬಲಿಯಾಗುವ ಮೂಲಕ ದೇಶದಲ್ಲಿ ಹಂದಿಜ್ವರಕ್ಕೆ ಬಲಿಯಾದವರ ಸಂಖ್ಯೆ 7ಕ್ಕೆ ಏರಿದಂತಾಗಿದೆ. ಇಂದು 95 ಎಚ್1ಎನ್1 ಪ್ರಕರಣ ದಾಖಲಾಗಿದ್ದು, ಒಟ್ಟು ದೇಶಾದ್ಯಂತ 959 ಮಂದಿಗೆ ಸೋಂಕು ಇರುವ ಬಗ್ಗೆ ವರದಿಯಾಗಿದೆ. ಎಚ್1ಎನ್1 ವೈರಸ್ ಹಬ್ಬುವಿಕೆಯ ಕೇಂದ್ರ ಬಿಂದು ಎಂಬಂತಾಗಿರುವ ಪುಣೆಯಲ್ಲಿ ಎಲ್ಲಾ ಶಾಲಾ ಕಾಲೇಜುಗಳು ಮತ್ತು ಮಾಲ್ಗಳನ್ನು ಒಂದು ವಾರ ಮುಚ್ಚಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
WD
"ಪುಣೆ ಹಾಗೂ ಹತ್ತಿರದ ಪಿಂಪ್ರಿ ಚಿಂಚ್ವಾಡ್ನ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಖಾಸಗಿ ಕೋಚಿಂಗ್ ಕ್ಲಾಸುಗಳು ಏಳು ದಿವಸಗಳ ಕಾಲ ಮುಚ್ಚಿರುತ್ತವೆ" ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಅಜಿತ್ ಪವಾರ್ ತಿಳಿಸಿದ್ದಾರೆ. ಈ ಅಂತರವನ್ನು ದಿಪಾವಳಿ ರಜೆಯನ್ನು ಕಡಿಮೆಗೊಳಿಸುವ ಮೂಲಕ ಸರಿದೂಗಿಸುವುದಾಗಿ ಅವರು ಹೇಳಿದ್ದಾರೆ.
ಚಿತ್ರಮಂದಿರಗಳನ್ನು ಮೂರು ದಿನಗಳ ಕಾಲ ಮುಚ್ಚಲು ನಿರ್ದೇಶನ ನೀಡಲಾಗಿದೆ. ಜನತೆಯು ಅದರಲ್ಲೂ ವಿಶೇಷವಾಗಿ ಅಸ್ವಸ್ಥರಾಗಿರುವವರು ಮನೆಯೊಳಗೆ ಇರುವಂತೆ ಹಾಗೂ ಜನ ಸೇರುವ ಕಡೆಗಳಿಗೆ ತೆರಳದಂತೆ ಸೂಚನೆ ನೀಡಿದ್ದಾರೆ.
ಸ್ವೈನ್ ಫ್ಲೂ ಎಂಬ ಈ ಮಹಾಮಾರಿಯು ಪುಣೆ ನಗರವನ್ನು ಅತ್ಯಂತ ಕೆಟ್ಟದಾಗಿ ವ್ಯಾಪಿಸಿದ್ದು, 14ರ ಹರೆಯದ ಬಾಲಕಿ ರಿದಾ ಶೇಖ್ ಈ ರೋಗಕ್ಕೆ ಮೊದಲು ತುತ್ತಾಗಿದ್ದಳು. ಸೋಮವಾರ ಮುಂಜಾನೆ ವೈದ್ಯ ಬಾಬಾ ಸಾಹೇಬ್ ಮಾನೆ ಅವರು ಸಾವನ್ನಪ್ಪುವುದರೊಂದಿಗೆ ಇಲ್ಲಿ ಒಟ್ಟು ಸಾವಿನ ಸಂಖ್ಯೆ ಮೂರಕ್ಕೇರಿದೆ. ರಾಷ್ಟ್ರದಲ್ಲಿ ಬಲಿಯಾದವರ ಸಂಖ್ಯೆ ಏಳಕ್ಕೆ ಏರಿದೆ,
ಪ್ರಸಕ್ತ ಅಲ್ಲಿ ಆರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ನಾಲ್ವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ವೆಂಟಿಲೇಟರ್ ಅಳವಡಿಸಿದ ಇಬ್ಬರು ರೋಗಿಗಳನ್ನು ಯಾವುದೇ ಸಮಯದಲ್ಲಿ ಮನೆಗೆ ಕಳುಹಿಸಬಹುದಾಗಿದೆ ಎಂದು ಸಸೂನ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.