ಪೋರ್ಟ್ಬ್ಲೇರ್, ಮಂಗಳವಾರ, 11 ಆಗಸ್ಟ್ 2009( 09:06 IST )
ಅಂಡಮಾನ್ನ ಹಿಂದೂ ಮಹಾಸಾಗರದಲ್ಲಿ ಮಧ್ಯರಾತ್ರಿಯ ವೇಳೆ ರಿಕ್ಟರ್ ಮಾಪನದಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ. ಇದೇ ವೇಳೆ ಭಾರತ, ಮ್ಯಾನ್ಮಾರ್, ಇಂಡೋನೇಶ್ಯ, ಥೈಲ್ಯಾಂಡ್ ಮತ್ತು ಬಾಂಗ್ಲಾದೇಶದಲ್ಲಿ ನೀಡಲಾಗಿದ್ದ ಸುನಾಮಿ ಕಟ್ಟೆಚ್ಚರವನ್ನು ರದ್ದು ಪಡಿಸಲಾಗಿದೆ.
ಭೂಕಂಪ ಸಂಭವಿಸಿ ಸುಮಾರು ಎರಡೂವರೆ ಗಂಟೆಗಳ ಬಳಿಕವೂ ಸಾಗರ ತಟದ ರಾಷ್ಟ್ರಗಳಿಂದ ಸುನಾಮಿಯ ಕುರಿತ ಯಾವುದೇ ಸುದ್ದಿ ಇಲ್ಲ. ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯವು 7.7ರ ತೀವ್ರತೆಯಲ್ಲಿ ಮಧ್ಯರಾತ್ರಿ 1.55ರ ವೇಳೆಗೆ ಭೂಕಂಪ ಸಂಭವಿಸಿದೆ ಎಂದು ಹೇಳಿದೆ.
ಪೋರ್ಟ್ಬ್ಲೇರ್ನಿಂದ ಉತ್ತರಕ್ಕೆ 160 ಮೈಲಿಗಳ(160ಕಿಮೀ) ದೂರದಲ್ಲಿ 20.6 ಮೈಲಿಗಳ(33ಕಿಮೀ) ಸಾಗರದಾಳದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು. ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತದ ಪೆಸಿಫಿಕ್ ಸುನಾಮಿ ಎಚ್ಚರಿಕಾ ಕೇಂದ್ರವು, ಭೂಕಂಪ ಕೇಂದ್ರದಿಂದ 1000ಕಿಮೀ(600) ಮೈಲಿಗಳ ತನಕ ವಿಧ್ವಂಸಕಾರಿ ಅಲೆಗಳು ಅಪ್ಪಳಿಸಬಹುದು ಎಂದು ಎಚ್ಚರಿಕೆ ನೀಡಿತ್ತಾದರೂ ಅದು ಮತ್ತೆ ತನ್ನ ಎಚ್ಚರಿಕೆಯನ್ನು ರದ್ದುಪಡಿಸಿದೆ.
ಚೆನ್ನೈ, ಬೆಂಗಳೂರುಗಳಲ್ಲೂ ಕಂಪನ ಇದೇ ವೇಳೆ ಚೆನ್ನೈ, ಭುವನೇಶ್ವರ ಸೇರಿದಂತೆ ಪಶ್ಚಿಮ ಕರಾವಳಿಯ ಬಂಗಾಳಕೊಲ್ಲಿಗೆ ತಾಗಿಕೊಂಡಿರುವ ನಗರಗಳಲ್ಲಿ ಲಘುಕಂಪನ ಸಂಭವಿಸಿದೆ. ಬೆಂಗಳೂರಿನಲ್ಲಿಯೂ ಅಲ್ಪ ಪ್ರಮಾಣದ ಕಂಪನ ಸಂಭವಿಸಿದೆ.
ಜನರೆಲ್ಲರು ಗಾಢನಿದ್ರೆಯಲ್ಲಿ ತೊಡಗಿದ್ದ ವೇಳೆಗೆ ಭೂಮಿ ಕಂಪಿಸಿದ್ದು ಕೆಲವು ಮಂದಿ ಮನೆಯಿಂದ ಹೊರಗೋಡಿದ್ದಾರೆ. ಮಲಗಿದ್ದವರಿಗೆ ಮಂಚವು ತೂಗಿದ ಅನುಭವವಾದರೆ, ರಾತ್ರಿ ಪಾಳಿಯಲ್ಲಿ ದುಡಿಯುತ್ತಿದ್ದವರಿಗೆ ಕಂಪ್ಯೂಟರ್ ಅಲುಗಾಡಿದ ಅನುಭವವಾಯಿತು.