ಸ್ವೈನ್ಫ್ಲೂ ರೋಗದ ಕೇಂದ್ರಬಿಂದು ಎಂಬಂತಿರುವ ಪುಣೆಯಲ್ಲಿ 13ರ ಹರೆಯದ ಬಾಲಕಿಯೊಬ್ಬಳು ಮಧ್ಯರಾತ್ರಿ ಸಾವನ್ನಪ್ಪುವುದರೊಂದಿಗೆ ಈ ಮಹಾಮಾರಿಗೆ ರಾಷ್ಟ್ರದಲ್ಲಿ ಬಲಿಯಾದವರ ಒಟ್ಟು ಸಂಖ್ಯೆ ಎಂಟಕ್ಕೇರಿದಂತಾಗಿದೆ.
ಅಹಲ್ಯಾದೇವಿ ಶಾಲೆಯ ವಿದ್ಯಾರ್ಥಿಯಾಗಿದ್ದ ಶೃತಿ ಗಾವಡೆ ಎಂಬ ಬಾಲಕಿ ಎಚ್1ಎನ್1ಗೆ ಬಲಿಯಾಗಿರುವುದಾಗಿ ಸಸೂನ್ ಜನರಲ್ ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಕ ಡಾ| ಪಾಂಡುರಂಗ ಪವಾರ್ ಹೇಳಿದ್ದಾರೆ.
WD
ನಾರಾಯಣ ಪೇಟೆ ಪ್ರದೇಶದ ಶೃತಿಗೆ ಸೋಂಕು ತಗುಲಿರುವುದು ಶನಿವಾರ ಪತ್ತೆಯಾಗಿತ್ತು. ಆಕೆಯನ್ನು ಭಾನುವಾರ ಗಂಭೀರ ಸ್ಥಿತಿಯಲ್ಲಿ ಸಸೂನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿಗೆ ಆಗಸ್ಟ್ ಏಳರಿಂದ ವೆಂಟಿಲೇಟರ್ ಅಳವಡಿಸಲಾಗಿತ್ತು. ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗುತ್ತಲೇ ಖಾಸಗೀ ಆಸ್ಪತ್ರೆಯಿಂದ ಸಸೂನ್ ಆಸ್ಪತ್ರೆಗೆ ಶಿಪಾರಸ್ಸು ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಸೋಮವಾರ ರಾತ್ರಿ 35 ರ ಹರೆಯದ ಸಂಜಯ್ ತಿಲೆಕಾರ್ ಎಂಬ ಫಾರ್ಮಾಸಿಸ್ಟ್ ಅವರು ಸಾವನ್ನಪ್ಪಿರುವ ಕುರಿತು ಸುದ್ದಿಯಾಗಿರುವ ಬೆನ್ನಿಗೆ ಶೃತಿಯ ಸಾವಿನ ಕುರಿತು ವರದಿಯಾಗಿದೆ. ಪುಣೆಯೊಂದರಲ್ಲೇ ಈ ರೋಗಕ್ಕೆ ಐದು ಮಂದಿ ಆಹುತಿಯಾಗಿದ್ದಾರೆ. ಆಹಮದಾಬಾದಿನ ಅನಿವಾಸಿ ಉದ್ಯಮಿ ಹಾಗೂ ಚೆನ್ನೈನ ಬಾಲಕನೊಬ್ಬನೂ ಹಂದಿಜ್ವರದಿಂದ ಸಾವನ್ನಪ್ಪಿದ್ದಾರೆ.
ಶಾಲಾಕಾಲೇಜುಗಳಿಗೆ ರಜೆ ಸೋಮವಾರ 95 ಎಚ್1ಎನ್1 ಪ್ರಕರಣ ದಾಖಲಾಗಿದ್ದು, ಒಟ್ಟು ದೇಶಾದ್ಯಂತ 959 ಮಂದಿಗೆ ಸೋಂಕು ಇರುವ ಬಗ್ಗೆ ವರದಿಯಾಗಿದೆ. ಎಚ್1ಎನ್1 ವೈರಸ್ ತೀವ್ರವಾಗಿ ಕಾಡಿರುವ ಪುಣೆಯಲ್ಲಿ ಎಲ್ಲಾ ಶಾಲಾ ಕಾಲೇಜುಗಳು ಮತ್ತು ಮಾಲ್ಗಳನ್ನು ಒಂದು ವಾರ ಮುಚ್ಚಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
"ಪುಣೆ ಹಾಗೂ ಹತ್ತಿರದ ಪಿಂಪ್ರಿ ಚಿಂಚ್ವಾಡ್ನ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಖಾಸಗಿ ಕೋಚಿಂಗ್ ಕ್ಲಾಸುಗಳು ಏಳು ದಿವಸಗಳ ಕಾಲ ಮುಚ್ಚಿರುತ್ತವೆ" ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಅಜಿತ್ ಪವಾರ್ ತಿಳಿಸಿದ್ದಾರೆ. ಈ ಅಂತರವನ್ನು ದಿಪಾವಳಿ ರಜೆಯನ್ನು ಕಡಿಮೆಗೊಳಿಸುವ ಮೂಲಕ ಸರಿದೂಗಿಸುವುದಾಗಿ ಅವರು ಹೇಳಿದ್ದಾರೆ.
ಚಿತ್ರಮಂದಿರಗಳನ್ನು ಮೂರು ದಿನಗಳ ಕಾಲ ಮುಚ್ಚಲು ನಿರ್ದೇಶನ ನೀಡಲಾಗಿದೆ. ಜನತೆಯು ಅದರಲ್ಲೂ ವಿಶೇಷವಾಗಿ ಅಸ್ವಸ್ಥರಾಗಿರುವವರು ಮನೆಯೊಳಗೆ ಇರುವಂತೆ ಹಾಗೂ ಜನ ಸೇರುವ ಕಡೆಗಳಿಗೆ ತೆರಳದಂತೆ ಸೂಚನೆ ನೀಡಿದ್ದಾರೆ.
ಸ್ವೈನ್ ಫ್ಲೂ ಎಂಬ ಈ ಮಹಾಮಾರಿಯು ಪುಣೆ ನಗರವನ್ನು ಅತ್ಯಂತ ಕೆಟ್ಟದಾಗಿ ವ್ಯಾಪಿಸಿದ್ದು, 14ರ ಹರೆಯದ ಬಾಲಕಿ ರಿದಾ ಶೇಖ್ ಈ ರೋಗಕ್ಕೆ ಮೊದಲು ತುತ್ತಾಗಿದ್ದಳು. ಸೋಮವಾರ ಮುಂಜಾನೆ ವೈದ್ಯ ಬಾಬಾ ಸಾಹೇಬ್ ಮಾನೆ ಅವರು ಸಾವನ್ನಪ್ಪಿದ್ದರು.
ಪ್ರಸಕ್ತ ಅಲ್ಲಿ ಆರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ನಾಲ್ವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ವೆಂಟಿಲೇಟರ್ ಅಳವಡಿಸಿದ ಇಬ್ಬರು ರೋಗಿಗಳನ್ನು ಯಾವುದೇ ಸಮಯದಲ್ಲಿ ಮನೆಗೆ ಕಳುಹಿಸಬಹುದಾಗಿದೆ ಎಂದು ಸಸೂನ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.