ಮುಸ್ಲಿಮರ ಪವಿತ್ರ ತಿಂಗಳಾಗಿರುವ ರಂಜಾನ್ನಲ್ಲಿ, ಮುಂಬೈ ದಾಳಿಕೋರ ನರಹಂತಕ ಉಗ್ರ ಜೈಲಿನಲ್ಲಿ 'ರೋಜಾ'(ಉಪವಾಸ) ಅನುಸರಿಸಲಿದ್ದಾನೆ ಎಂಬುದಾಗಿ ಆತನ ವಕೀಲ ಅಬ್ಬಾಸ್ ಖಾಜ್ಮಿ ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದ್ದು ಇದಕ್ಕಾಗಿ ವ್ಯವಸ್ಥೆ ಮಾಡಲು ಕೋರಿದ್ದಾರೆ. ಈ ಮೂಲಕ ಉಗ್ರನಿಗೆ ಉಪವಾಸದ ಸಮಯದ ಮಾಹಿತಿ ನೀಡಬಹುದಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ. ಆಗಸ್ಟ್ 21ರಿಂದ ಉಪವಾಸ ಆರಂಭವಾಗಲಿದೆ.
ರಂಜಾನ್ ತಿಂಗಳಲ್ಲಿ ಮುಸ್ಲಿಮರು ಉಪವಾಸ ಆಚರಿಸುತ್ತಿದ್ದು, ಅವರು ಸೂರ್ಯೋದಯಕ್ಕೆ ಮುಂಚಿತವಾಗಿ ಮತ್ತು ಸೋರ್ಯೋದಯದ ನಂತರವಷ್ಟೆ ಆಹಾರ ಸೇವಿಸುತ್ತಾರೆ ಎಂಬುದಾಗಿ ಖಾಜ್ಮಿ ನುಡಿದರು. ಈ ವಿನಂತಿಗೆ ಸದ್ಯವೇ ತಾನು ಆದೇಶ ನೀಡುವುದಾಗಿ ಮುಂಬೈ ದಾಳಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶ ತಹಲಿಯಾನಿ ಹೇಳಿದ್ದಾರೆ.
ರಂಜಾನ್ ವೇಳೆ ಸೆಂಟ್ರಲ್ ಜೈಲಿನಲ್ಲಿ ಹಾಲು ಮತ್ತು ಹಣ್ಣುಗಳನ್ನು ಒದಗಿಸಲಾಗುತ್ತದೆ. ಇದೇ ಅನುಕೂಲವನ್ನು ಕಸಬ್ನಿಗೂ ವಿಸ್ತರಿಸಬಹುದು ಎಂಬುದಾಗಿ ಹೇಳಿದ ಖಾಜ್ಮಿ, ಆದರೆ ಕಸಬ್ನನ್ನು ಪ್ರತ್ಯೇಕ ಸೆಲ್ನಲ್ಲಿ ಇರಿಸಿರುವ ಕಾರಣ ಯಾವಾಗ ಉಪವಾಸ ಬಿಡಬೇಕು ಎಂಬುದು ಕಸಬ್ನಿಗೆ ತಿಳಿಯುವುದಿಲ್ಲ ಎಂದು ವಿವರಿಸಿದರು.
ಹಾಗಾಗಿ ಆತನಿಗೆ ಸಮಯದ ವಿವರಣೆ ನೀಡಬೇಕು ಎಂದು ನ್ಯಾಯಾಲಯವನ್ನು ವಿನಂತಿಸಿದ್ದು, ಈ ಮೂಲಕ ಆತ ಯಾವಾಗ ಉಪವಾಸ ಹಿಡಿಯಬೇಕು ಮತ್ತು ಬಿಡಬೇಕು ಎಂಬ ಮುಂಜಾನೆ ಮತ್ತು ಸಾಯಂಕಾಲದ ಸಮಯ ತಿಳಿಯಬಹುದು ಎಂದು ಹೇಳಿದರು.
ಕಥೆ ಪುಸ್ತರ ಓದಲು ಅವಕಾಶ ಇದೇವೇಳೆ ಕಥೆ ಪುಸ್ತಕ ಓದುವ ಅವಕಾಶವನ್ನು ಉಗ್ರನಿಗೆ ನೀಡಲಾಗಿದೆ. ಕಲಿಸಾ ಔರ್ ಆಗ್, ಕಾಫಿಲ-ಇ-ಹೆಜಾಜ್, ಕೈಸರ್ ವಾ ಕುಸ್ರ ಮತ್ತು ದಾಸ್ತಾನೆ ಮರ್ದಾನೆ ಹರ್ ಎಂಬ ಉರ್ದು ಪುಸ್ತಕಗಳನ್ನು ಕಸಬ್ನ ವಿನಂತಿಯ ಮೇಲೆ ಆತನಿಗೆ ನೀಡಲಾಗುವುದು. ನ್ಯಾಯಾಲಯವು ಪುಸ್ತಕಗಳನ್ನು ಜೈಲರ್ಗೆ ನೀಡಲಿದೆ ಮತ್ತು ಜೈಲರ್ ಈ ಪುಸ್ತಕವನ್ನು ಕಸಬ್ಗೆ ನೀಡುತ್ತಾರೆ. ಬಳಿಕ ಈ ಪುಸ್ತಕವನ್ನು ಜೈಲಿನ ಗ್ರಂಥಾಲಯದಲ್ಲಿ ಇತರ ಕೈದಿಗಳ ಅನೂಕೂಲಕ್ಕಾಗಿ ಇರಿಸಲಾಗುವುದು.
ಎಂಟಿಎನ್ಎಲ್ ವೀಡಿಯೋ ಕಾನ್ಫರೆನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಮೆರಿಕ ಪ್ರಜೆಗಳ ವಿಚಾರಣೆ ನಡೆಸಲು ಅನುಕೂಲ ಕಲ್ಪಿಸಬೇಕು ಎಂಬುದಾಗಿ ನ್ಯಾಯಾಲಯವು ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ ಅನ್ನು ವಿನಂತಿ ಮಾಡಿದೆ.
ಮೂವರು ಅಮೆರಿಕ ಪ್ರಜೆಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಸಿದ್ಧತೆಗಳು ನಡೆದಿವೆ. ಭದ್ರತಾ ಕಾರಣಕ್ಕಾಗಿ ಅವರ ಗುರುತನ್ನು ಬಹಿರಂಗ ಪಡಿಸಲಾಗಿಲ್ಲ ಎಂದು ಸರ್ಕಾರಿ ವಕೀಲರಾಗಿರುವ ಉಜ್ವಲ್ ನಿಖಂ ಅವರು ಹೇಳಿದ್ದಾರೆ.