ಮಂಗಳವಾರ 99 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ರಾಷ್ಟ್ರದಾದ್ಯಂತ ಒಟ್ಟು 2,000ಕ್ಕೂ ಹೆಚ್ಚು ಮಂದಿಗೆ ಎಚ್1ಎನ್1 ಸೋಂಕು ತಗುಲಿರುವುದು ದೃಢಪಟ್ಟಿದೆ. ಮಹಾಮಾರಿಗೆ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 30.
ದೆಹಲಿಯಿಂದ 10, ಬೆಂಗಳೂರು ಮತ್ತು ಮುಂಬೈಯಿಂದ ತಲಾ 20 ಹಾಗೂ ಪುಣೆಯಿಂದ 18 ಹೊಸ ಪ್ರಕರಣಗಳು ಪತ್ತೆಯಾಗಿವೆ. ಔರಂಗಾಬಾದ್, ಅಹಮದಾಬಾದ್, ಧೂಳೆಯಿಂದ ತಲಾ ಮೂರು, ಪಂಚಕುಲ, ಹೈದರಾಬಾದ್, ಜೈಪುರ, ಕೊಚ್ಚಿನ್, ಕ್ಯಾಲಿಕಟ್, ನಾಸಿಕ್ ಮತ್ತು ದಿಬ್ರುಘರ್ನಿಂದ ತಲಾ ಎರಡೆರಡು ಹೊಸ ಸೋಂಕಿತರನ್ನು ಗುರುತಿಸಲಾಗಿದೆ.
ಗಾಝಿಯಾಬಾದ್, ಗೋವಾ, ಉಡುಪಿ, ಮಣಿಪಾಲ, ಸೂರತ್, ಸಿಲ್ಚಾರ್, ಕೊಲ್ಹಾಪುರ್ ಮತ್ತು ಸತಾರದಲ್ಲಿ ತಲಾ ಒಬ್ಬೊಬ್ಬರಿಗೆ ಹಂದಿಜ್ವರ ಸೋಂಕು ತಗುಲಿದೆ.
ಕೊಚ್ಚಿನ್ನಲ್ಲಿ ಪತ್ತೆಯಾಗಿರುವ ಎರಡೂ ಪ್ರಕರಣದ ಸೋಂಕಿತರು ಈ ಹಿಂದೆ ದುಬೈಗೆ ಪ್ರಯಾಣಿಸಿದ್ದರು.
ದೆಹಲಿಯಲ್ಲಿ ಪತ್ತೆಯಾದ ಪ್ರಕರಣಗಳ ಸೋಂಕಿತರಲ್ಲಿ ಒಬ್ಬರು ಥಾಯ್ಲೆಂಡ್, ಮತ್ತಿಬ್ಬರು ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದರು. ಹೈದರಾಬಾದ್ ಸೋಂಕಿತರಲ್ಲಿ ಒಬ್ಬರು ಸಿಂಗಾಪುರ ಹಾಗೂ ಮತ್ತೊಬ್ಬರು ಕೌಲಾಲಂಪುರಕ್ಕೆ ಈ ಹಿಂದೆ ತೆರಳಿದ್ದರು.
ಇತರೆಲ್ಲ ಪ್ರಕರಣಗಳ ಸೋಂಕಿತರು ವಿದೇಶ ಪ್ರವಾಸದ ಯಾವುದೇ ಹಿನ್ನಲೆ ಹೊಂದಿಲ್ಲ.
ಇದುವರೆಗೆ 10,578 ಜನರನ್ನು ತಪಾಸಣೆಗೊಳಪಡಿಸಲಾಗಿದ್ದು, ಅವರಲ್ಲಿ 2,206 ಮಂದಿಗೆ ಎಚ್1ಎನ್1 ತಗುಲಿರುವುದು ಖಚಿತವಾಗಿದೆ. ಇವರಲ್ಲಿ 708 ಮಂದಿ ಈಗಾಗಲೇ ಚಿಕಿತ್ಸೆ ಪಡೆದು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ಕರ್ನಾಟಕದಲ್ಲಿ.. ರಾಜ್ಯದಲ್ಲಿ ಇದುವರೆಗೆ ಒಟ್ಟು 194 ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ. ಅವರಲ್ಲಿ 93 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಉಳಿದ 101 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ 94, ಮಣಿಪಾಲದಲ್ಲಿ 5 ಮತ್ತು ಬೆಳಗಾವಿಯಲ್ಲಿ ಇಬ್ಬರು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ಐದು ಮಂದಿ ಹಂದಿಜ್ವರ ಸೋಂಕಿನಿಂದ ಮೃತಪಟ್ಟಿರುವುದನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ನಡುವೆ ಮಂಗಳವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಂಜುನಾಥ್ (20) ಎಂಬ ಯುವಕ ಸಾವನ್ನಪ್ಪಿದ ಬಗ್ಗೆಯೂ ವರದಿಗಳು ಬಂದಿವೆ. ಅದು ಖಚಿತವಾದಲ್ಲಿ ರಾಜ್ಯದಲ್ಲಿ ಎಚ್1ಎನ್1 ಸೋಂಕಿಗೆ ಬಲಿಯಾದವರ ಸಂಖ್ಯೆ ಆರಕ್ಕೇರಲಿದೆ.
ಮುಂಬೈಯಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮೋದಿಯಾ ಮೊಹಮ್ಮದ್ ಶೇಖ್ (7 ತಿಂಗಳು) ಎಂಬ ಹೆಣ್ಣು ಮಗು ಶನಿವಾರ ಮೃತಪಟ್ಟಿದೆ. ಈ ನಡುವೆ ಔರಂಗಾಬಾದ್ನ ಆಸ್ಪತ್ರೆಯೊಂದರಲ್ಲಿ ರಾವ್ ಸಾಹೇಬ್ ಮಾಧವರಾವ್ ರಾವತೆ (47) ಎಂಬವರು ಕೂಡ ಸಾವನ್ನಪ್ಪಿದ ವರದಿ ಬಂದಿದೆ. ಆದರೆ ಇದು ಎಚ್1ಎನ್1 ಸೋಂಕಿನಿಂದಲೇ ಸಾವನ್ನಪ್ಪಿದ ಬಗ್ಗೆ ಇನ್ನೂ ದೃಢವಾಗಿಲ್ಲ.