ತನ್ನ ಪುಸ್ತಕದಲ್ಲಿ ಪಾಕಿಸ್ತಾನದ ಸ್ಥಾಪನೆಗೆ ಕಾರ್ಯಕರ್ತರಾಗಿರುವ ಮಹ್ಮದ್ ಅಲಿ ಜಿನ್ನಾರನ್ನು ಶ್ಲಾಘಿಸಿರುವ ಜಸ್ವಂತ್ ಸಿಂಗ್ ಅವರನ್ನು ಭಾರತೀಯ ಜನತಾ ಪಕ್ಷ ಬುಧವಾರ ತನ್ನ ಪಕ್ಷದಿಂದ ಹೊರಹಾಕಿದೆ. ಅವರ ಪ್ರಾಥಮಿಕ ಸದಸ್ಯತ್ವವನ್ನೂ ಕಿತ್ತು ಹಾಕಲಾಗಿದೆ.
ಬಿಜೆಪಿಯ ಮೂರು ದಿನಗಳ ಚಿಂತನ ಬೈಠಕ್ ಶಿಮ್ಲಾದಲ್ಲಿ ಆರಂಭವಾದ ತಕ್ಷಣವೇ ಜಸ್ವಂತ್ ಅವರ ಹೊಸ ಪುಸ್ತಕದ ಕುರಿತು ಚರ್ಚೆ ನಡೆಸಿದ್ದು, ಪಕ್ಷವು ಅವರನ್ನು ತಕ್ಷಣವೇ ಪಕ್ಷದಿಂದ ಹೊರಹಾಕಲು ನಿರ್ಧರಿಸಿತು.
ಈ ಕುರಿತು ನೀಡಲಾಗಿರುವ ಹೇಳಿಕೆಯಲ್ಲಿ, ಜಿನ್ನಾ ಅವರ ಈ ಅಭಿಮತವು ಪಕ್ಷಕ್ಕೆ ಮುಜಗರ ಉಂಟುಮಾಡಿದೆ ಎಂದು ಹೇಳಿದೆ. ಜಸ್ವಂತ್ ಸಿಂಗ್ ಅವರು ಬೈಠಕ್ನಲ್ಲಿ ಹಾಜರಿರಲಿಲ್ಲ.
ತನ್ನ ಪುಸ್ತಕದಲ್ಲಿ ಜಿನ್ನಾರನ್ನು ಜಸ್ವಂತ್ ಸಿಂಗ್ ಅವರು ಹೊಗಳಿ ಬರೆದಿರುವ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಪಕ್ಷವು ನಿರ್ಧರಿಸಿರುವುದಾಗಿ ಬಿಜೆಪಿ ಅಧ್ಯಕ್ಷ ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ಜಿನ್ನಾ ಒಬ್ಬ ಮಹಾನ್ ಮತ್ತು ಸಮಾಜವಾದಿ ನಾಯಕ ಎಂದು ಜಸ್ವಂತ್ ತನ್ನ ಪುಸ್ತಕದಲ್ಲಿ ಹೊಗಳಿದ್ದರು. ಅಲ್ಲದೆ ಭಾರತ-ಪಾಕಿಸ್ತಾನ ವಿಭಜನೆಗೆ ಜಿನ್ನಾ ಜವಾಬ್ದಾರರಲ್ಲ ಎಂದೂ ಹೇಳಿದ್ದರು.
ಜಿನ್ನಾರ ಈ ಅಭಿಪ್ರಾಯ ವೈಯಕ್ತಿಕವಾದದ್ದೇ ವಿನಹ ಪಕ್ಷದ್ದಲ್ಲ ಎಂಬುದಾಗಿ ಬಿಜೆಪಿ ತಕ್ಷಣ ಪ್ರತಿಕ್ರಿಯೆ ನೀಡಿತ್ತು. ಇದೀಗ ಅವರನ್ನು ಉಚ್ಚಾಟಿಸುವ ಮೂಲಕ ಶಿಸ್ತು ಕ್ರಮ ಕೈಗೊಂಡಿದೆ.