ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಟೇಲ್ ಟೀಕೆ; ಮೋದಿ ರಾಜ್ಯದಲ್ಲಿ ಜಸ್ವಂತ್ ಪುಸ್ತಕಕ್ಕೆ ನಿಷೇಧ
(Gujarat | Jaswant Singh | M A Jinnah | Vallabhbhai Patel)
ಪಟೇಲ್ ಟೀಕೆ; ಮೋದಿ ರಾಜ್ಯದಲ್ಲಿ ಜಸ್ವಂತ್ ಪುಸ್ತಕಕ್ಕೆ ನಿಷೇಧ
ಅಹಮದಾಬಾದ್, ಗುರುವಾರ, 20 ಆಗಸ್ಟ್ 2009( 10:52 IST )
ಬಿಜೆಪಿಯಿಂದ ಜಸ್ವಂತ್ ಸಿಂಗ್ ಉಚ್ಛಾಟನೆಗೊಂಡ ಬೆನ್ನಿಗೆ ಗುಜರಾತ್ ಸರಕಾರವು ಪಾಕಿಸ್ತಾನದ ಸ್ಥಾಪಕ ಎಂ.ಎ. ಜಿನ್ನಾ ಕುರಿತ ವಿವಾದಿತ ಪುಸ್ತಕವನ್ನು ನಿಷೇಧಿಸಿದೆ. ಅದಕ್ಕೆ ನೀಡಲಾಗಿರುವ ಕಾರಣ ಪುಸ್ತಕದಲ್ಲಿ ವಲ್ಲಭಭಾಯ್ ಪಟೇಲ್ರಿಗೆ ಅಗೌರವ ತೋರಿಸಲಾಗಿದೆ ಎನ್ನವುದು.
'ಜಿನ್ನಾ-- ಭಾರತ, ವಿಭಜನೆ, ಸ್ವಾತಂತ್ರ್ಯ' ಎಂಬ ಜಸ್ವಂತ್ ಸಿಂಗ್ ಬರೆದಿರುವ ಪುಸ್ತಕವನ್ನು ರಾಜ್ಯದಲ್ಲಿ ಮಾರಾಟ ಮಾಡದಂತೆ ಗೃಹ ಇಲಾಖೆಯು ನಿಷೇಧ ಹೇರಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಅಧಿಕೃತವಾಗಿ ಪ್ರಕಟಿಸಿದೆ.
PTI
ಸರ್ದಾರ್ ವಲ್ಲಭಭಾಯ್ ಪಟೇಲ್ರನ್ನು ಅವಮಾನಕಾರಿಯಾಗಿ ಚಿತ್ರಿಸಲಾಗಿರುವುದರಿಂದ ಪುಸ್ತಕಕ್ಕೆ ನಿಷೇಧ ಹೇರಲಾಗಿದೆ. ನಿಷೇಧ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ನರೇಂದ್ರ ಮೋದಿ ಸರಕಾರ ತಿಳಿಸಿದೆ.
ಆಧುನಿಕ ಭಾರತದ ನಿರ್ಮಾತೃ ಎಂದೇ ಜನಪ್ರಿಯರಾಗಿರುವ ವಲ್ಲಭಾಭಾಯ್ ಪಟೇಲ್ರ ಹೆಸರು ಕೆಡಿಸುವ ರೀತಿಯಲ್ಲಿ ಪುಸ್ತಕದಲ್ಲಿ ಹಲವು ಉಲ್ಲೇಖಗಳಿವೆ. ಹಾಗಾಗಿ ನಿಷೇಧ ಅನಿವಾರ್ಯವಾಗಿತ್ತು ಎಂದು ರಾಜ್ಯದ ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ.
ಈ ಪುಸ್ತಕದಲ್ಲಿ ಪಾಕಿಸ್ತಾನ ಸಂಸ್ಥಾಪಕ ಎಂ.ಎ. ಜಿನ್ನಾರನ್ನು ಹೊಗಳಲಾಗಿದ್ದು, ಭಾರತದ ಮೊತ್ತ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಮತ್ತು ಪಟೇಲ್ರೇ ದೇಶ ವಿಭಜನೆಗೆ ಕಾರಣ ಎಂದು ಆರೋಪಿಸಲಾಗಿದೆ.
ದೇಶದ ವಿಭಜನೆಗೆ ಸರ್ದಾರ್ ಪಟೇಲ್ ಅಲ್ಪಮಾತ್ರ ಕಾರಣವೆಂದೂ ಭಾರತದ ಯಾರೊಬ್ಬರು ಭಾವಿಸಿಲ್ಲ ಎಂದು ಸಚಿವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಇದು ರಾಜಕೀಯ ನಿರ್ಧಾರವೇ ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು, ಇದು ಆಡಳಿತಾತ್ಮಕ ನಿಲುವು ಎಂದರು.
ಈ ಪುಸ್ತಕವನ್ನು ನಿಷೇಧಿಸದಿದ್ದರೆ, ಪಟೇಲ್ ಹುಟ್ಟಿದ ರಾಜ್ಯದಲ್ಲಿ ಅವರ ಘನತೆ ಅವಮಾನಕ್ಕೊಳಗಾದಂತಾಗುತ್ತದೆ ಮತ್ತು ಮಸಿ ಬಳಿದಂತಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.