ದೇಶಾದ್ಯಂತ ಸೋಮವಾರ ಹಂದಿ ಜ್ವರದ ಮಹಾಮಾರಿಗೆ 7 ಮಂದಿ ಅಸುನೀಗಿದ್ದು, ಇದರಿಂದಾಗಿ ಎಚ್1ಎನ್1 ವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ 100ರ ಗಡಿ ಮುಟ್ಟಿದೆಯೆಂದು ಆರೋಗ್ಯ ಅಧಿಕಾರಿಗಳು ನವದೆಹಲಿಯಲ್ಲಿ ತಿಳಿಸಿದ್ದಾರೆ. ದೇಶದಲ್ಲೇ ಹಂದಿಜ್ವರದ ತೀವ್ರ ಸೋಂಕಿಗೆ ಗುರಿಯಾದ ಮಹಾರಾಷ್ಟ್ರದಲ್ಲಿ ಸೋಮವಾರ ನಾಲ್ವರು ಸತ್ತಿದ್ದಾರೆ. 100 ಮಂದಿಯ ಸಾವಿನಲ್ಲಿ ಮಹಾರಾಷ್ಟ್ರ ಒಂದರಲ್ಲೇ 55 ಜನರು ಸತ್ತಿದ್ದಾರೆ.
ಚತ್ತೀಸ್ಗಢದಲ್ಲಿ ಸೋಮವಾರ ಪ್ರಥಮ ಸಾವನ್ನು ದಾಖಲಿಸಿದ್ದು, ಕರ್ನಾಟಕದಲ್ಲಿ ಇನ್ನೂ ಇಬ್ಬರು ಹಂದಿ ಜ್ವರಕ್ಕೆ ಬಲಿಯಾಗಿದ್ದಾರೆ. ದೇಶಾದ್ಯಂತ ಎಚ್1ಎನ್1 ವೈರಸ್ ಸೋಂಕಿಗೆ ಹೊಸದಾಗಿ ಇನ್ನೂ 106 ಜನರು ಒಳಗಾಗಿದ್ದಾರೆ. ಹೊಸ ಪ್ರಕರಣಗಳೊಂದಿಗೆ ದೇಶಾದ್ಯಂತ ಹಂದಿ ಜ್ವರ ಸೋಂಕಿಗೆ ಗುರಿಯಾದವರ ಸಂಖ್ಯೆ 3987ರ ಗಡಿ ದಾಟಿದೆ. ಹಂದಿಜ್ವರದ ಸಾವು ಮತ್ತು ಸಕಾರಾತ್ಮಕ ಪ್ರಕರಣ ಕುರಿತಂತೆ ಮಹಾರಾಷ್ಟ್ರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಸೋಂಕಿಗೆ ಒಳಗಾದವರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಬಳಿಕ ದೆಹಲಿಯಲ್ಲಿ ಅತೀ ಹೆಚ್ಚು ಸೋಂಕುಪೀಡಿತರಾಗಿದ್ದಾರೆ. ಕರ್ನಾಟಕದಲ್ಲಿ ಮತ್ತೆ 11 ಪ್ರಕರಣಗಳು ವರದಿಯಾಗಿದ್ದು, ಸೋಂಕಿಗೆ ಒಳಗಾದವರ ಸಂಖ್ಯೆ 441ಕ್ಕೆ ಮುಟ್ಟಿದೆ.