ಬಿಜೆಪಿ ಪಕ್ಷವು ನ.12ರಂದು ಸರ್ಕಾರ ರಚನೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಕೂಟವು ಆ ದಿನದಂದು ಪ್ರಮಾಣವಚನ ಸ್ವೀಕರಿಸಲಿದೆ. ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರನ್ನು ಭೇಟಿ ಮಾಡಿದ ಬಳಿಕ ಬಿಜೆಪಿ-ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡ್ಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯಪಾಲರು ಸರ್ಕಾರ ರಚನೆ ಮಾಡುವಂತೆ ಸಮ್ಮಿಶ್ರ ಕೂಟದ ಪಕ್ಷಗಳಿಗೆ ಔಪಚಾರಿಕ ಆಹ್ವಾನ ನೀಡಿದ್ದಾರೆಂದು ತಿಳಿಸಿದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭ ಸೋಮವಾರ ನಡೆಯಲಿದೆ ಎಂದೂ ಅವರು ಹೇಳಿದರು.ಸಮ್ಮಿಶ್ರ ಸಚಿವಸಂಪುಟದ ಸ್ವರೂಪವನ್ನು ಬಹಿರಂಗಮಾಡಲು ನಿರಾಕರಿಸಿದ ಅವರು, ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಸೇರಿದಂತೆ ಜೆಡಿಎಸ್ ನಾಯಕರ ಜತೆ ಚರ್ಚಿಸಿದ ಬಳಿಕ ಸಚಿವಸಂಪುಟದಲ್ಲಿ ಸೇರ್ಪಡೆಯಾಗುವ ಸಚಿವರ ಹೆಸರುಗಳಿಗೆ ಅಂತಿಮ ಸ್ವರೂಪ ನೀಡುವುದಾಗಿ ಹೇಳಿದರು.
ಸದನದಲ್ಲಿ ಬಲಾಬಲ ಪ್ರದರ್ಶನಕ್ಕೆ ರಾಜ್ಯವಿಧಾನಸಭೆಯನ್ನು ಕೂಡಲೇ ಕರೆಯಲಾಗುವುದು ಎಂದೂ ಅವರು ನುಡಿದರು. ಬಿಜೆಪಿ ಮತ್ತು ಜೆಡಿಎಸ್ ಸ್ಥಿರ ಸರ್ಕಾರ ನೀಡಿ ಎಲ್ಲ ವರ್ಗದ ಜನರ ಹಿತರಕ್ಷಣೆ ಮಾಡುವುದೆಂದು ಯಡ್ಯೂರಪ್ಪ ಅವರನ್ನು ಜತೆಗೂಡಿದ್ದ ಕುಮಾರಸ್ವಾಮಿ ಹೇಳಿದರು.
ಬಿಜೆಪಿ ನಾಯಕರ ಜತೆ ಖಾತೆ ಹಂಚಿಕೆ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಹೇಳಿದ ಕುಮಾರಸ್ವಾಮಿ ಭಾನುವಾರ ಜೆಡಿಎಲ್ಪಿ ಸಭೆ ಕರೆಯಲಾಗಿದ್ದು ಉಪಮುಖ್ಯಮಂತ್ರಿ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ನುಡಿದರು.
|