ಸುಮಾರು 27 ಗಂಟೆಗಳ ಕಾಲ ಶಸ್ತ್ತ್ರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಚತುರ್ಭುಜೆಯಾಗಿದ್ದ ಲಕ್ಷ್ಮಿಗೆ ತನ್ನ ದೇಹದ ಭಾಗವಾಗಿದ್ದ ಪರಾವಲಂಬಿ ಅವಳಿ ಅಂಗಾಂಗಗಳೆಲ್ಲಿ ಎಂಬುದೇ ಅಚ್ಚರಿಯಾದಂತೆ ಆಗಾಗ್ಗೆ ಮುಟ್ಟಿನೋಡಿಕೊಳ್ಳುತ್ತಿದ್ದಾಳೆ.
ಕೃತಕ ಉಸಿರಾಟದ ವ್ಯವಸ್ಥೆಯನ್ನು ತೆಗೆಯಲಾಗಿದ್ದು, ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಮಾಧ್ಯಮಗಳ ಮೂಲಕ ಲಕ್ಷ್ಮಿಯ ವಿಷಯ ತಿಳಿದ ಜೋಧಪುರ ಮೂಲದ ಸುಚೇತಾ ಕೃಪಲಾನಿ ಶಿಕ್ಷಾ ನಿಕೇತನ ಎಂಬ ಸ್ವಯಂಸೇವಾ ಸಂಸ್ಥೆ ಲಕ್ಷ್ಮಿ ಮತ್ತು ಆಕೆಯ ಕುಟುಂಬವನ್ನು ದತ್ತುಪಡೆಯಲು ತಿರ್ಮಾನಿಸಿದೆ.
ವಿಕಲಾಂಗ ಚೇತನರ ಪುನರ್ವಸತಿಯಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಯ ಕಾರ್ಯದರ್ಶಿ ಬೈರೊನ್ ಸಿಂಗ್ ಭಾರತಿ ಈ ವಿಷಯವನ್ನು ತಿಳಿಸಿದ್ದಾರೆ.
ಲಕ್ಷ್ಮಿ ಮತ್ತು ಕುಟುಂಬದ ಸದಸ್ಯರನ್ನು ಕರೆತರಲು ಬೆಂಗಳೂರಿಗೆ ಬರುವುದಾಗಿ ಅವರು ತಿಳಿಸಿದ್ದಾರೆ.ಲಕ್ಷ್ಮಿ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಕುಟುಂಬ ಸಹಿತ ಕರೆತರಲಾಗುವುದು. ಇದಕ್ಕೆ ಪೊಷಕರು ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
|