ಬಿಜೆಪಿ ಸರ್ಕಾರವು ವಿಧಾನಸಭೆಯಲ್ಲಿ ನವೆಂಬರ್ 19ರಂದು ವಿಶ್ವಾಸಮತ ಕೋರಿಕೆಗೆ ನಿರ್ಧರಿಸಿದೆ. ಅಧಿಕಾರ ವಹಿಸಿಕೊಂಡ 8 ದಿನಗಳಲ್ಲಿ ಬಹುಮತ ಸಾಬೀತುಮಾಡಬೇಕೆಂದು ರಾಜ್ಯಪಾಲ ರಾಮೇಶ್ವರ್ ಠಾಕೂರ್ ಕಟ್ಟುನಿಟ್ಟಿನ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಅವರ ಆದೇಶಕ್ಕೆ ಕಟ್ಟುಬಿದ್ದು 19ರಂದು ವಿಶ್ವಾಸಮತ ಯಾಚನೆಗೆ ನಿರ್ಧರಿಸಿತು.
ಮಂಗಳವಾರ ಮಧ್ಯಾಹ್ನ ನಡೆದ ತುರ್ತು ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತೆಂದು ಹೇಳಲಾಗಿದೆ. ಸರ್ಕಾರಕ್ಕೆ ಬಹುಮತ ಸಾಬೀತಿಗೆ ಅನುವು ಮಾಡಲು ನ.23ರಂದು ಒಂದು ದಿನದ ವಿಶೇಷ ಅಧಿವೇಶನ ಕರೆಯುವಂತೆ ರಾಜ್ಯಪಾಲರನ್ನು ಕೋರಲು ನಿರ್ಧರಿಸಿರುವುದಾಗಿ ಸೋಮವಾರ ನಡೆದ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಯಡ್ಯೂರಪ್ಪ ತಿಳಿಸಿದ್ದರು.
ಆದರೆ ಅಧಿಕಾರ ವಹಿಸಿಕೊಂಡ 8 ದಿನಗೊಳಗೆ ಬಹುಮತ ಸಾಬೀತು ಮಾಡುವಂತೆ ರಾಜ್ಯಪಾಲರು ಆದೇಶ ನೀಡಿದ್ದಾರೆಂದು ಮುಖ್ಯಮಂತ್ರಿ ತಿಳಿಸಿದರು. ರಾಜ್ಯಪಾಲರು ಸರ್ಕಾರ ರಚನೆಗೆ ತಮ್ಮನ್ನು ಆಹ್ವಾನಿಸಿದಾಗ 8 ದಿನಗಳಲ್ಲಿ ಬಹುಮತ ಸಾಬೀತು ಮಾಡುವ ಬಗ್ಗೆ ತಮಗೆ ಯಾವ ಸೂಚನೆಯನ್ನೂ ನೀಡಿರಲಿಲ್ಲ ಎಂದು ಯಡ್ಯೂರಪ್ಪ ತಿಳಿಸಿದರು.
|