ಯಡಿಯೂರಪ್ಪ ಸರ್ಕಾರ ನ.19ರಂದು ಬಲಾಬಲ ಪರೀಕ್ಷೆ ಎದುರಿಸುವ ಮುಂಚೆಯೇ ತನ್ನ ಷರತ್ತುಗಳಿಗೆ ಒಪ್ಪಿಗೆ ಸೂಚಿಸುವಂತೆ ಜೆಡಿಎಸ್ ಮಿತ್ರಪಕ್ಷ ಬಿಜೆಪಿಗೆ ಅಂತಿಮಗಡುವನ್ನು ವಿಧಿಸುವ ಮೂಲಕ ತಮ್ಮ ಬೆಂಬಲವನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಪರೋಕ್ಷವಾಗಿ ಸೂಚಿಸಿದೆ.
ಜೆಡಿಎಸ್ ವರಿಷ್ಠ ದೇವೇಗೌಡ ಅವರು ಬಿಜೆಪಿಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಈ ಸಂದೇಶವನ್ನು ಮುಟ್ಟಿಸಿದ್ದಾರೆ. ಬಿಜೆಪಿಗೆ ಅಂತಿಮಗಡುವನ್ನು ವಿಧಿಸಿದ ಬಳಿಕ ಬೆಂಗಳೂರಿಗೆ ಹಿಂತಿರುಗಿದ ಮಾಜಿ ಪ್ರಧಾನಮಂತ್ರಿ ದೇವೇಗೌಡ, ಬಿಜೆಪಿ ತಮ್ಮ ಷರತ್ತುಗಳಿಗೆ ಒಪ್ಪಿಗೆ ಸೂಚಿಸದಿದ್ದರೆ ಜೆಡಿಎಸ್ ಶಾಸಕರು ಬಿಜೆಪಿ ಪರವಾಗಿ ಮತ ನೀಡುತ್ತಾರೆಂದು ನಿರೀಕ್ಷಿಸುವಂತಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ಸಮ್ಮಿಶ್ರಸರ್ಕಾರವನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಲು ದೇವೇಗೌಡರ 12 ಷರತ್ತುಗಳಿಗೆ ಉತ್ತರಿಸಲು ನ.18ರವರೆಗೆ ಯಡಿಯೂರಪ್ಪ ಈಗಾಗಲೇ ಸಮಯಾವಕಾಶ ಕೇಳಿದ್ದಾರೆ.
ತಮ್ಮ ಪುತ್ರ ಕುಮಾರಸ್ವಾಮಿಗೆ ನಿರ್ಧಾರ ಕೈಗೊಳ್ಳುವ ಮತ್ತು ಆಡಳಿತಾತ್ಮಕ ವಿಷಯಗಳಾದ ಉನ್ನತಾಧಿಕಾರಿಗಳ ನೇಮಕ ಮತ್ತು ಬಡ್ತಿಯಲ್ಲಿ ಅಧಿಕಾರ ನೀಡಬೇಕು. ಮತ್ತು ಜೆಡಿಎಸ್ ಸಲಹೆ ಮಾಡಿದ ಅಭ್ಯರ್ಥಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು. ಕುಮಾರಸ್ವಾಮಿ ಜತೆ ಸಮಾಲೋಚಿಸಿದ ಬಳಿಕವೇ ಖಾತೆ ಹಂಚಿಕೆ ಮಾಡಬೇಕು, ಅಲ್ಪಸಂಖ್ಯಾತರಿಗೆ ಮತ್ತು ದಲಿತರಿಗೆ ರಕ್ಷಣೆ ನೀಡಬೇಕು ಮುಂತಾದವು ದೇವೇಗೌಡರ ಷರತ್ತುಗಳಲ್ಲಿ ಒಳಗೊಂಡಿದೆ.
|