ವಿಧಾನಸಭೆ ವಿಸರ್ಜನೆಯಾಗಬೇಕು ಅಂತ ಮೊದಲಿನಿಂದಲೂ ಹೇಳುತ್ತ ಬಂದವನು ನಾನು. ಹಾಗಾಗಿ ಕಾಂಗ್ರೆಸ್ ಜತೆ ಮೈತ್ರಿಗಾಗಿ ಸೋನಿಯಾ ಗಾಂಧಿ ಅವರಿಗೆ ನಾನ್ಯಾಕೆ ಪತ್ರ ಬರೆಯಲಿ? ಅಂತ ಕೇಳಿದ್ದಾರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ.
ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಮತ ಚಲಾಯಿಸುವಂತೆ ತಮ್ಮ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಿ ದೆಹಲಿಗೆ ದೌಡಾಯಿಸಿದ್ದ ಗೌಡರು ಸೋನಿಯಾರೊಂದಿಗೆ ಮಾತುಕತೆ ನಡೆಸಲಿದ್ದಾರೆ, ಕಾಂಗ್ರೆಸ್ ಜೊತೆ ಜೆಡಿಎಸ್ ಮರುಮೈತ್ರಿ ಸಾಧಿಸುವ ದೃಷ್ಟಿಯಿಂದ ಅವರಿಗೆ ಪತ್ರ ಬರೆದಿದ್ದಾರೆ ಎಂಬ ಸುದ್ದಿಗಳು ಹಬ್ಬಿದ ಹಿನ್ನೆಲೆಯಲ್ಲಿ ಪ್ರಶ್ನಿಸಿದಾಗ ಮಾಧ್ಯಮದವರಿಗೆ ಗೌಡರು ಮಾರುತ್ತರ ನೀಡಿದ್ದು ಹೀಗೆ.
ನಮಗೆ ಅಂಥ ಯಾವ ಪ್ರಮೇಯವೂ ಇಲ್ಲ, ಒಂದು ವಾರದೊಳಗಾಗಿ ಮತ್ತೊಂದು ಸರ್ಕಾರ ಸ್ಥಾಪಿಸುವೆ. ಇದು ಶೇ.200ರಷ್ಟು ಖಂಡಿತ ಎಂದೂ ನಾನು ಹೇಳಿಲ್ಲ. ಕಾಂಗ್ರೆಸ್ನೊಂದಿಗೆ ಮರುಮೈತ್ರಿ ಸಾಧ್ಯವೇ ಇಲ್ಲ, ಚುನಾವಣೆಗೆ ನಾವು ಸಿದ್ಧ ಎಂದು ನಾನು ಯಾವಾಗಲೋ ಹೇಳಿದ್ದೇನೆ. ಸುಮ್ಮನೇ ಅನವಶ್ಯಕ ಪ್ರಶ್ನೆಗಳನ್ನು ಕೇಳಿ ನನ್ನನ್ನು ಕೆರಳಿಸಬೇಡಿ ಎಂದು ದೇವೇಗೌಡ ಈ ಸಂದರ್ಭದಲ್ಲಿ ಹೇಳಿದರೆಂದು ತಿಳಿದುಬಂದಿದೆ.
|