ಜೆಡಿಎಸ್ನಲ್ಲಿನ ಅಸಮಾಧಾನ ಮತ್ತಷ್ಟು ಸ್ಫೋಟಗೊಳ್ಳುವ ಮೂಲಕ, ರಾಜ್ಯರಾಜಕಾರಣದಲ್ಲಿನ ಬಿಕ್ಕಟ್ಟು ಹೊರಬೀಳುವುದರೊಂದಿಗೆ ಇದೀಗ ಜೆಡಿಎಸ್ನ ಹಿರಿಯ ಮುಖಂಡ ಎಂ.ಪಿ.ಪ್ರಕಾಶ್ ಬಂಡಾಯದ ಬಾವುಟ ಹಾರಿಸಿದ್ದಾರೆ.
ಈ ಹಿಂದೆ ಪಕ್ಷದ ವರಿಷ್ಠರ ವಿರುದ್ಧ ಬಂಡಾಯ ಎದ್ದಿದ್ದ ಮಾಜಿ ಸಚಿವ ಎಂ.ಪಿ.ಪ್ರಕಾಶ್ ಈಗ ನ.29ರಂದು ಕರೆದಿರುವ ಪ್ರಮುಖ ಮುಖಂಡರ ಸಭೆಗೆ ಗೈರು ಹಾಜರಾಗುವುದಾಗಿ ಘೋಷಿಸಿದ್ದಾರೆ. ಇದೇ ಹಾದಿಯಲ್ಲಿ ಸಾಗಲು ಅನೇಕ ಶಾಸಕರು ಮತ್ತು ಮುಖಂಡರು ನಿರ್ಧರಿಸುವ ಮೂಲಕ ಜೆಡಿಎಸ್ ಈಗ ಅಧಃಪತನದ ಅಂಚಿನಲ್ಲಿದೆ.
ಪ್ರಕಾಶ್ ಅವರಂತಹ ಬದ್ದತೆ ಇರುವ ನಾಯಕರನ್ನೇ ಕಳೆದುಕೊಂಡರೆ, ಪಕ್ಷದಲ್ಲಿ ಉಳಿಯುವ ನಾಯಕರಲ್ಲಿ ಯಾರಿಗೆ ವರ್ಚಸ್ಸು ಇದೆ ಎಂಬ ಪ್ರಶ್ನೆ ವರಿಷ್ಠರನ್ನು ಕಾಡಲಾರಂಭಿಸಿದೆ. ಅಲ್ಲದೇ ಇದು ಅಪ್ಪ-ಮಕ್ಕಳ ಪಕ್ಷವಾಗಿಯೇ ಉಳಿಯಲಿ ಎಂಬ ತೀರ್ಮಾನಕ್ಕೆ ಕೆಲ ಶಾಸಕರು ಬಂದಿರುವುದಾಗಿ ಊಹಾಪೋಹಾ ಹಬ್ಬಲಾರಂಭಿಸಿದೆ.
ಮಾಜಿ ಸಚಿವ ಚೆಲುವರಾಯಸ್ವಾಮಿ ರಾಜಕೀಯ ನಿವೃತ್ತಿಯ ಬಗ್ಗೆ ಆಲೋಚಿಸುತ್ತಿರುವುದಾಗಿ ಹೇಳಿದ್ದಾರೆ. ಬಾಲಕೃಷ್ಣ ಸೇರಿದಂತೆ ಅನೇಕ ಶಾಸಕರು ಬಿಜೆಪಿಯ ಬಾಗಿಲು ತಟ್ಟುತ್ತಿದ್ದಾರೆ. ಇನ್ನೂ ಕೆಲವರು ಕಾಂಗ್ರೆಸ್ ಪಕ್ಷದ ಬಾಗಿಲು ತೆಗೆಯುವುದನ್ನೇ ಎದುರು ನೋಡುತ್ತಿದ್ದಾರೆ.
ಆ ನಿಟ್ಟಿನಲ್ಲಿ ನ.29ರಂದು ನಡೆಯಲಿರುವ ಸಭೆ ಜೆಡಿಎಸ್ ಪಕ್ಷದ ಅಳಿವು-ಉಳಿವಿನ ನಿರ್ಣಾಯಕ ಸಭೆಯೂ ಆಗಲಿದೆ ಎಂಬುದು ಪಕ್ಷದ ಅನೇಕ ಶಾಸಕರ ಅಭಿಪ್ರಾಯವಾಗಿದೆ.
|