ಸಂಸತ್ತಿನಲ್ಲಿ ಹಾಲಿ ವಿಧಾನಸಭೆ ವಿಸರ್ಜಿಸಿ ತೆಗೆದುಕೊಂಡ ನಿರ್ಣಯವನ್ನು ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳು ಸ್ವಾಗತಿಸಿವೆ.
ವಿಧಾನಸಭೆ ವಿಸರ್ಜನೆ ಹೊರತುಪಡಿಸಿ ಅನ್ಯಮಾರ್ಗವಿರಲಿಲ್ಲ, ನಾವು ಮೊದಲಿನಿಂದಲೂ ವಿಧಾನಸಭೆ ವಿಸರ್ಜನೆಯಾಗಬೇಕು, ಚುನಾವಣೆ ನಡೆಯಬೇಕು ಎಂದು ಹೇಳುತ್ತಲೇ ಬಂದಿದ್ದೇವೆ ಎಂದು ನುಡಿದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಸತ್ತು ವಿಧಾನಸಭೆ ವಿಸರ್ಜನೆಗೆ ಅನುಮೋದನೆ ನೀಡಿದ್ದು ಸ್ವಾಗತಾರ್ಹ ಎಂದು ಹೇಳಿದ್ದಾರೆ.
ಸದ್ಯದ ರಾಜಕೀಯ ಗೊಂದಲಮಯವಾಗಿದ್ದು, ಯಾವುದೇ ಪಕ್ಷವೂ ಸರ್ಕಾರ ರಚಿಸುವ ಸ್ಥಿತಿಯಲ್ಲಿ ಇಲ್ಲ. ಚುನಾವಣೆ ಎದುರಿಸುವುದೊಂದೇ ಈಗ ಉಳಿದಿರುವ ಮಾರ್ಗ. ಆದ್ದರಿಂದ ಸಂಸತ್ ಕೈಗೊಂಡ ನಿರ್ಣಯ ಸರಿಯಾದದ್ದು ಎಂದು ಜೆಡಿಎಸ್ ರಾಜ್ಯಧ್ಯಕ್ಷ ಮೆರಾಜುದ್ದೀನ್ ಪಟೇಲ್ ಸ್ವಾಗತಿಸಿದ್ದಾರೆ.
ವಿಧಾನಸಭೆ ವಿಸರ್ಜನೆಗೆ ಸಂಸತ್ತು ಅನುಮೋದನೆ ನೀಡಿರುವುದನ್ನು ಸ್ವಾಗತಿಸುತ್ತೇವೆ. ಸರ್ಕಾರ ಪತನಗೊಂಡ ನಂತರ ತಕ್ಷಣ ವಿಸರ್ಜನೆಯಾಗಬೇಕು ಎಂದು ನಾವೇ ಮೊದಲು ಒತ್ತಾಯಿಸಿದ್ದೆವು ಎಂದು ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ ಆದಷ್ಟು ಬೇಗ ಚುನಾವಣೆಯಾಗಬೇಕು ಎಂದು ಹೇಳಿದ್ದಾರೆ.
|