ರಾಜ್ಯದಲ್ಲಿ ಅನಿಷ್ಟ ದೇವದಾಸಿ ಪದ್ಧತಿಗೆ ಅಂತ್ಯ ಹಾಡಲಾಗಿದ್ದರೂ ಅವರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ನಿರ್ಲಕ್ಷ್ಯದಿಂದ ವರ್ತಿಸುತ್ತಿದೆ.
ತಮಗೆ ಪಡಿತರ ಚೀಟಿ ನೀಡಬೇಕು ಎಂಬ ಬೇಡಿಕೆಯೂ ಸೇರಿದಂತೆ ಇನ್ನಿತರ ಬೇಡಿಕೆಗಳೊಂದಿಗೆ ದೇವದಾಸಿ ಮಹಿಳೆಯರು ಚಿತ್ರದುರ್ಗ ಜಿಲ್ಲೆಯ್ಲ ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ.
ಅಂತ್ಯೋದಯ ಯೋಜನೆಯಡಿ ಪಡಿತರ ಚೀಟಿ ನೀಡಿ, ಅಮೃತ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡಿ ಎಂಬುದು ಅವರ ಪ್ರಮುಖ ಬೇಡಿಕೆ. ಉಳಿದಂತೆ ಮಾಸಿಕ ಪಿಂಚಣಿಯನ್ನು ಒಂದು ಸಾವಿರ ರೂಪಾಯಿಗೆ ಹೆಚ್ಚಳ ಮಾಡಬೇಕೆಂಬ ಮತ್ತೊಂದು ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕಾಗಿದೆ.
ಮೊದಮೊದಲು ದೇವದಾಸಿ ಜೋಗಮ್ಮ ಹಾಗೂ ಜೋಗಪ್ಪಗಳು ಪ್ರತಿಭಟನೆ ನಡೆಸುವಾಗ ಕೇವಲ ಹತ್ತಿಪತ್ತು ಮಂದಿ ಮಾತ್ರ ಕಾಣಸಿಗುತ್ತಿದ್ದು, ಈಗ ಅವರ ಸಂಖ್ಯೆ ಸಾವಿರ ದಾಟುತ್ತಿದೆ. ನಿಜಕ್ಕೂ ಅಷ್ಟೊಂದು ಮಂದಿ ದೇವದಾಸಿ ಮಹಿಳೆಯರು ಹಾಗೂ ಜೋಗಪ್ಪಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಇದ್ದಾರೆಯೇ ಎನ್ನುವುದು ಕೂಡ ವಿಸ್ಮಯವಾಗಿ ಕಾಣುತ್ತಿದೆ.
ಅಸಂಘಟಿತರಾಗಿ ಯಾವುದೋ ಮೂಲೆಯಲ್ಲಿದ್ದ ಇವರನ್ನು ಮೊದಲು ಸಂಘಟಿತರನ್ನಾಗಿ ಮಾಡಿ ಕರೆತಂದದ್ದು ಭಾರತೀಯ ಜನತಾಪಕ್ಷ. ಈಗ ಕಮ್ಯುನಿಸ್ಟ್ ಪಕ್ಷದ ಅಂಗ ಸಂಸ್ಥೆಗಳು ದೇವದಾಸಿಯರನ್ನು ಸಂಘಟಿಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾಡಳಿತದ ಮೇಲೆ ಒತ್ತಡ ಹೇರುತ್ತಿವೆ.
|