ಸಮಾನ ಮನಸ್ಕರೆಲ್ಲ ಸೇರಿ ಸಭೆ ಮಾಡಿದ ಮಾತ್ರಕ್ಕೆ ನನ್ನ ಜಂಘಾಬಲವೇನೂ ಉಡುಗಿಲ್ಲ. ಅದನ್ನು ಮುಂಬರುವ ಚುನಾವಣೆಯಲ್ಲಿ ತೋರಿಸುತ್ತೇನೆ - ಇದು ಜೆಡಿಎಸ್ ವರಿಷ್ಠ ದೇವೇಗೌಡರ ಗುಡುಗು.
ಅವರೆಲ್ಲ ಸಭೆ ನಡೆಸಲಿ, ಪಕ್ಷ ತೊರೆಯಬೇಕೆಂದಿದ್ದರೆ ಬೇಗ ತೊರೆಯಲಿ. ನಾನು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳುವವನಲ್ಲ ಎಂದು ಗುಟುರು ಹಾಕಿರುವ ಗೌಡರು, ವಿಧಾನಸಭೆ ವಿಸರ್ಜನೆಯಾದಾಗಲೆಲ್ಲ ಪಕ್ಷ ಬಿಡುವಿಕೆ - ಸೇರುವಿಕೆ ಮಾಮೂಲು. ಇಂಥದ್ದನ್ನೆಲ್ಲ ನಾನು ಸಾಕಷ್ಟು ನೋಡಿದ್ದೇನೆ. ಹಾಗಾಗಿ ನನ್ನ ಮನೋಸ್ಥೈರ್ಯವೇನೂ ಕುಂದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಈ ತಿಂಗಳ 7ರಂದು ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ ನಡೆಸಿದ ನಂತರ ರಾಜ್ಯದಾದ್ಯಂತ ಪ್ರವಾಸ ನಡೆಸಿ ಮುಂಬರಲಿರುವ ಚುನಾವಣೆಗಾಗಿ ಪಕ್ಷವನ್ನು ಸನ್ನದ್ಧಗೊಳಿಸಲಾಗುವುದು ಎಂದು ಗೌಡರು ಈ ಸಂದರ್ಭದಲ್ಲಿ ತಿಳಿಸಿದರು.
|