ಎಸ್.ಎಂ.ಕೃಷ್ಣ ರಾಜ್ಯ ರಾಜಕೀಯಕ್ಕೆ ಮರಳಲಿ ಎಂದು ಒತ್ತಾಯಿಸುವ ಗುಂಪು ಒಂದು ಕಡೆ; ಕಷ್ಟ ಪಟ್ಟು ಪಕ್ಷ ಕಟ್ಟಿದವರನ್ನು ಬಿಟ್ಟು ಮತ್ತಾರನ್ನೋ ಕರೆದು ತಾಂಬೂಲ ನೀಡುವುದೇಕೆ ಎಂದು ಕೇಳುವ ಬಣ ಇನ್ನೊಂದೆಡೆ.
ಇದು ಹೈಕಮಾಂಡ್ ವಿಧೇಯರ ಪಕ್ಷ ಎಂದೇ ಹೆಸರಾದ ಕಾಂಗ್ರೆಸ್ನಲ್ಲಿ ಕಂಡುಬರುತ್ತಿರುವ ಸದ್ಯದ ಚಿತ್ರಣ. ಈಗಾಗಲೇ ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ಪ್ರಸನ್ನಕುಮಾರ್ ಹಾಗೂ ಧ್ರುವಕುಮಾರ್ ಇವರೇ ಮೊದಲಾದ ಮಾಜಿ ಶಾಸಕರು ದೆಹಲಿಗೆ ತೆರಳಿ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಜ್ಯದ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸದಂತೆ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೊಂದು ಸಂಘಟನಾ ಶಕ್ತಿ ದೊರಕಬೇಕೆಂದರೆ ಎಸ್.ಎಂ.ಕೃಷ್ಣ ರಾಜ್ಯದ ರಾಜಕೀಯಕ್ಕೆ ಮರಳಬೇಕು ಹಾಗೂ ಯುವಕರಿಗೆ ಪಕ್ಷದಲ್ಲಿ ಆದ್ಯತೆ ದೊರೆಯಬೇಕು ಎಂಬ ನಿಟ್ಟಿನಲ್ಲಿ ನಾಯಕತ್ವ ಬದಲಾವಣೆಗೆ ಆಗ್ರಹ ಕೇಳಿಬಂದಿತ್ತು. ಎಸ್.ಎಂ.ಕೃಷ್ಣರೂ ರಾಜ್ಯದ ರಾಜಕೀಯಕ್ಕೆ ಮರಳಲು ಅಸಕ್ತಿ ತೋರಿರುವುದು, ಕೃಷ್ಣರ ನೀಲಿ ಕಣ್ಣಿನ ಹುಡುಗ ಡಿ.ಕೆ.ಶಿವಕುಮಾರ್ ಸಹ ಈ ಕುರಿತು ಆಸಕ್ತಿ ತೋರಿರುವುದು ಇದಕ್ಕೆ ಇಂಬು ಕೊಟ್ಟಂತಿತ್ತು.
ಆದರೆ ಮುಂಬರಲಿರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾವುದೇ ಭಿನ್ನಮತ, ಬಂಡಾಯ ಅಥವಾ ಪ್ರತ್ಯೇಕ ಬಣಗಳು ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ಪಕ್ಷದ ವರಿಷ್ಠರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಯಾರ ಮನಸ್ಸಿಗೂ ನೋವಾಗದಂತೆ ತೀರ್ಮಾನ ಕೈಗೊಳ್ಳಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
|