ದಶಕಗಳಷ್ಟು ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ನಾಯಕತ್ವದ ಕೊರತೆ ಕಾಡುತ್ತಿದೆಯೇ? ದೆಹಲಿಯಲ್ಲಿ ನಡೆಯುತ್ತಿರುವ ಸರ್ಕಸ್ಗಳನ್ನು ನೋಡಿದರೆ ಈ ಮಾತು ನಿಜವೆನಿಸುತ್ತಿದೆ.
ಹೈಕಮಾಂಡ್ ವಿಧೇಯರ ಪಕ್ಷ ಎಂದೇ ಹೆಸರಾಗಿದ್ದರೂ ಇಲ್ಲಿಯೂ ವಿವಿಧ-ವಿಭಿನ್ನ ಬಣಗಳಿವೆ. ಅದರೆ ಹೊರಗಿನ ವಾತಾವರಣಕ್ಕೆ ಅದು ಅಷ್ಟಾಗಿ ಕಾಣಿಸಿಕೊಂಡಿಲ್ಲ ಎಂದೇ ಹೇಳಬಹುದು. ರಾಜ್ಯ ರಾಜಕಾರಣಕ್ಕೆ ಕೃಷ್ಣ ಮರಳಲಿದ್ದಾರೆ ಎಂಬ ಸುದ್ದಿಗಳು ಹಬ್ಬಿರುವ ಹಿನ್ನೆಲೆಯಲ್ಲಿ ಈ ವಿವಿಧ ಬಣಗಳು ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಹೆಣಗಾಡುತ್ತಿವೆ.
ದೇವೇಗೌಡರಿಗೆ ರಾಜ್ಯದಲ್ಲಿ ಸೆಡ್ಡು ಹೊಡೆಯಬಲ್ಲ ಸಮರ್ಥ ನಾಯಕರೊಬ್ಬರು ಬೇಕಾಗಿದ್ದಾರೆ. ಅಷ್ಟೇ ಅಲ್ಲ ಅವರು ಮಾಸ್ ಲೀಡರ್ ಕೂಡಾ ಆಗಿರಬೇಕಾದ್ದು ಅನಿವಾರ್ಯವಾಗಿದೆ. ಬರಲಿರುವ ಚುನಾವಣೆ ಕಾಂಗ್ರೆಸ್ಗೆ ಮಾಡು ಇಲ್ಲವೇ ಮಡಿ ಎಂಬಂಥ ಸವಾಲನ್ನು ತಂದೊಡ್ಡಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡಾಗ ಹೈಕಮಾಂಡ್ ಮನಸ್ಸಿನಲ್ಲಿ ಮೂಡಿದ್ದು ಪ್ರಾಯಶಃ ಎಸ್.ಎಂ.ಕೃಷ್ಣರೇ ಇರಬೇಕು.
ಕೃಷ್ಣರನ್ನು ರಾಜ್ಯ ರಾಜಕೀಯಕ್ಕೆ ಕಳಿಸುವುದರ ಕುರಿತಾದ ಸಾಧಕ-ಬಾಧಕಗಳನ್ನು ಚರ್ಚಿಸಲು ಹೈಕಮಾಂಡ್ ಕೃಷ್ಣರ ನೀಲಿ ಕಣ್ಣಿನ ಹುಡುಗಷಿ ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡಿರುವುದು ಕೃಷ್ಣರ ಮುರುಪ್ರವೇಶ ಖಚಿತ ಎನ್ನುವ ಅಂಶವನ್ನು ಸ್ಪಷ್ಟಪಡಿಸಿದೆ.
ಕಾಂಗ್ರೆಸ್ಸಲ್ಲೀಗ ಲಿಂಗಾಯಿತರ ಲಾಬಿಯೂ ಮೈಕೊಡವಿಕೊಂಡು ನಿಂತಿದೆ. ಸಿದ್ದರಾಮಯ್ಯ ಹಾಗೂ ಅವರ ಬಣದವರಿಗಿನ್ನೂ ಯಾವುದೇ ಸ್ಥಾನಮಾನ ನೀಡಿಲ್ಲ. ಈ ಎಲ್ಲ ಅಂಶಗಳನ್ನು ಕಾಂಗ್ರೆಸ್ ಹೇಗೆ ಸರಿದೂಗಿಸುವುದು ಎಂಬುದನ್ನೀಗ ಕಾದನೋಡಬೇಕಾಗಿದೆ.
|