ಅದಾವ ಗಳಿಗೆಯಲ್ಲಿ ಈ ಊರಿಗೆ ಆನೆಕಲ್ಲು ಎಂಬ ಹೆಸರಿಟ್ಟರೋ ಗೊತ್ತಿಲ್ಲ, ಆನೆಗಳ ಉಪಟಳಕ್ಕೆ ಕೊನೆಯೇ ಇಲ್ಲವಾಗಿದೆ.ಆನೇಕಲ್ ಸಮೀಪದ ಕೃಷ್ಣದೊಡ್ಡಿಯಲ್ಲಿ ರಾತ್ರಿ ಆನೆಗಳು ಕಾಣಿಸಿಕೊಂಡು ದಾಂಧಲೆ ಮಾಡಿವೆ. ಹೊಲಗಳಿಗೆ ನುಗ್ಗಿ ಬೆಳೆಗಳಿಗೆ ಹಾನಿ ಮಾಡಿರುವುದರಿಂದ ಅಲ್ಲಿನ ರೈತರು ಕಂಗಾಲಾಗಿದ್ದಾರೆ.
ರಕ್ಷಣೆಗಾಗಿ ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿವರ್ಗ ಇಲ್ಲಿಗೆ ಧಾವಿಸಿದ್ದರೂ ಅದರಿಂದೇನೂ ಪ್ರಯೋಜನವಾದಂತಿಲ್ಲ. ಕಾರಣ ಆನೆಗಳನ್ನು ನೋಡಲು ಬರುವ ಕುತೂಹಲಿಗಳ ದಂಡು ಮಾಡುವ ಅಬ್ಬರದಿಂದಾಗಿ ಹೊರ ಹೊರಟ ಆನೆಗಳು ಮತ್ತೆ ನೀಲಗಿರಿ ತೋಪಿನೊಳಗೆ ಸೇರಿಕೊಳ್ಳುತ್ತಿವೆ.
ಇದರೊಂದಿಗೆ ಹಗಲು ವೇಳೆಯಲ್ಲಿ ಸಂಚಾರ ದಟ್ಟಣೆಯೂ ಇರುತ್ತದಾದ್ದರಿಂದ ಆನೆಗಳು ರಸ್ತೆ ದಾಟಲು ತೊಂದರೆಯಾಗುತ್ತಿದೆ ಎಂದು ತಿಳಿದುಬಂದಿದೆ.ಇದರಿಂದ ಜನಗಳಿಗೆ ತೊಂದರೆಯಾಗಿರುವ ವರದಿಗಳು ಬಂದಿಲ್ಲವಾದರೂ ರೈತರು ಕಷ್ಟ ಪಟ್ಟುಬೆಳೆದ ಬೆಳೆಗೆ ಹಾನಿಯಾಗಿರುವುದು ರೈತರ ಆಕ್ರೋಶವನ್ನು ಹೆಚ್ಚಿಸಿದೆ ಎಂದು ತಿಳಿದುಬಂದಿದೆ.
|