ಜೆಡಿಎಸ್ ಒಡೆದ ಮನೆಯಾಗಲಿದೆ; ಅಲ್ಲಿನ ಹಿಂಡು ಹಿಂಡು ಮುಖಂಡರು ತಮ್ಮ ಪಕ್ಷ ಸೇರಲಿದ್ದಾರೆ, ಬಿಜೆಪಿ ಬಲವರ್ಧಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಅಧಿಕಾರದ ಗದ್ದುಗೆಯೇರಲಿದೆ ಎಂದೆಲ್ಲಾ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದ ರಾಜ್ಯದ ಬಿಜೆಪಿ ನಾಯಕರಿಗೆ ಕೊಂಚ ಹಿನ್ನಡೆಯಾಗುವ ಸಾಧ್ಯತೆಗಳಿವೆ.
ಜೆಡಿಎಸ್ ದಳಪತಿ ಎಂದೇ ಬಿಂಬಿತವಾಗಿರುವ ಕುಮಾರಣ್ಣ ಬಂಡಾಯಗಾರರ ಹೆಗಲು ಸವರಿರುವುದು ಸಾಕಷ್ಟು ಕೆಲಸ ಮಾಡಿರುವಂತಿದೆ. ನಿನ್ನೆಯ ತನಕ ಬಿಜೆಪಿ ಕಡೆ ಹಾರಲು ಎಡತಾಕುತ್ತಿದ್ದ ಚಲುವರಾಯಸ್ವಾಮಿ, ಅಲಂಗೂರು ಶ್ರೀನಿವಾಸ್ ಇವರೇ ಮೊದಲಾದವರು ಹಾರಿಸ ಹೊರಟಿದ್ದ ಕೆಂಬಾವುಟ ಬಿಳಿ ಬಣ್ಣಕ್ಕೆ ತಿರುಗುವ ಎಲ್ಲಾ ಸೂಚನೆಗಳೂ ಕಾಣುತ್ತಿರುವುದು ಪ್ರಸಕ್ತ ರಾಜಕೀಯ ವಿದ್ಯಮಾನಗಳಿಗೆ ಹಿಡಿದ ಕೈಗನ್ನಡಿಯಾಗಿದೆ.
ಜೆಡಿಎಸ್ ಮುಖಂಡರನ್ನು ಬಿಜೆಪಿಯತ್ತ ಸೆಳೆಯುವಲ್ಲಿ ಪಕ್ಷದ ಆರ್.ಅಶೋಕ್ ಹಾಗೂ ಕಟ್ಟಾ ಸುಬ್ರಮಣ್ಯ ನಾಯ್ಡು ಇಬ್ಬರೂ ಕಾಯಾ - ವಾಚಾ - ಮನಸಾ ಶ್ರಮಪಟ್ಟಿದ್ದು ಈಗ ರಹಸ್ಯವಾಗೇನೂ ಉಳಿದಿಲ್ಲ. ಒಂದು ಹಂತಕ್ಕೆ ಅವರು ಯಶಸ್ವಿಯೂ ಆಗಿದ್ದರು. ಆದರೆ ಇನ್ನೇನು ಗಾಳಕ್ಕೆ ಮೀನು ಬಿತ್ತು ಎಂಬಷ್ಟರಲ್ಲೇ ಕುಮಾರಣ್ಣ ಉರುಳಿಸಿದ ದಾಳ ಸಾಕಷ್ಟು ಕೆಲಸ ಮಾಡಿರುವಂತೆ ತೋರುತ್ತಿದೆ. ಹೀಗಾಗಿ ಬಿಜೆಪಿ ಮತ್ತೊಮ್ಮೆ ಕಾದುನೋಡುವ ತಂತ್ರಕ್ಕೆ ಶರಣಾಗಬೇಕಿದೆ.
ರಾಜಕೀಯದಲ್ಲಿ ಅಧಿಕಾರ ಮಂತ್ರವನ್ನಷ್ಟೇ ಜಪಿಸುತ್ತಿದ್ದರೆ ಸಾಲದು, ತಂತ್ರಗಾರಿಕೆಯೂ ಬೇಕು ಎಂಬುದು ಎಷ್ಟೊಂದು ನಿಜ ಅಲ್ಲವೇ?
|