ನಮ್ಮನ್ನು ಏಣಿಯಾಗಿ ಬಳಸಿಕೊಂಡ ರಾಷ್ಟ್ರೀಯ ಪಕ್ಷಗಳೇ ನಮ್ಮನ್ನು ಮುಗಿಸಲು ಹೊರಟಿವೆ. ಶತ್ರುಗಳ ಜತೆಯಲ್ಲೇ ಹಿತಶತ್ರುಗಳು, ಆಂತರಿಕ ಶತ್ರುಗಳನ್ನೂ ಎದುರಿಸಬೇಕಿದೆ ಎಂದು ಹೇಳಿರುವ ಮಾಜಿ ಪ್ರಧಾನಿ ದೇವೇಗೌಡ, ಇತರ ಪಕ್ಷಗಳು ಏನೇ ಷಡ್ಯಂತ್ರ ಮಾಡಿದರೂ ಮುಸ್ಲಿಮರು ನಮ್ಮ ಜೊತೆ ಇದ್ದಾರೆ, ಅವರನ್ನು ಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸದಿಂದ ನುಡಿದಿದ್ದಾರೆ.
ಪಕ್ಷದ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಮಾಜಿ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಈ ಮೂಲಕ ಓಟು ಬ್ಯಾಂಕ್ ಭದ್ರ ಎಂದು ಸೂಕ್ಷ್ಮವಾಗಿ ತಿಳಿಸಿದರು.
ಪ್ರತಿ ಚುನಾವಣಾ ಕ್ಷೇತ್ರದ ಮಾಹಿತಿ ಸಂಗ್ರಹಿಸಿ ಮುಖಂಡರಿಗೆ ನೀಡುವ ಕೆಲಸವನ್ನಷ್ಟೇ ನಾನು ಮಾಡುತ್ತೇನೆ. ಬಿ ಫಾರಂ ಹಂಚುವ ಕೆಲಸವನ್ನು ಮುಖಂಡರು ಮಾಡುತ್ತಾರೆ ಎನ್ನುವ ಮೂಲಕ ಹೊಸ ವ್ಯವಸ್ಥೆ ಹುಟ್ಟು ಹಾಕುವ ಸೂಚನೆ ನೀಡಿದ್ದು ಗೌಡರ ಮಾತಿನ ವಿಶೇಷವಾಗಿತ್ತು.
ಬೀದರ್, ಬಿಜಾಪುರ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ, ಧಾರವಾಡ, ಬೆಂಗಳೂರು, ಹುಬ್ಬಳ್ಳಿ, ಕಾರವಾರ, ಉಡುಪಿ, ಮಂಗಳೂರು, ಮಡಿಕೇರಿ. ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಗೌಡರು ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
|