ರೈತರ ಕೃಷಿ ಸಾಲದ ವಸೂಲಿಗೆ ದೂಂಡಾವರ್ತಿ ಕ್ರಮ ಕೈಗೊಳ್ಳಬಾರದೆಂಬ ಆರ್ಬಿಐ ಎಚ್ಚರಿಕೆ ಕಡೆಗಣಿಸಿದ ಐಸಿಐಸಿಐ ಬ್ಯಾಂಕ್ ಈಗ ಬೆಲೆ ತೆರಬೇಕಾಗಿದೆ. ಬ್ಯಾಂಕ್ ಅಧಿಕಾರಿಗಳ ಕಿರುಕಳದಿಂದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ರೈತರು ಗಂಭೀರವಾಗಿ ಪರಿಗಣಿಸಿ ಬ್ಯಾಂಕಿನ ಎದುರು ಪ್ರತಿಭಟನೆಗಳ ಸರಣಿಯನ್ನೇ ಹಮ್ಮಿಕೊಂಡಿದ್ದಾರೆ.
ಹೊಸಪುರದ ರೈತ ಎಚ್.ಎಂ.ಮಂಜುನಾಥ್ ಅವರಿಂದ ಸಾಲ ವಸೂಲಿಗೆ ಐಸಿಐಸಿಐ ಬ್ಯಾಂಕ್ ಅಳವಡಿಸಿದ ವಿಧಾನದಿಂದ ಡಿ. 4ರಂದು ಅವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿತ್ತು, ಮಂಜುನಾಥ್ ಐಸಿಐಸಿಐ ಬ್ಯಾಂಕ್ನಿಂದ ಟ್ರಾಕ್ಟರ್ ಖರೀದಿಗೆ 5.5 ಲಕ್ಷ ರೂ. ಸಾಲ ಮಾಡಿದ್ದ.
6 ತಿಂಗಳಿಗೊಮ್ಮೆ 48, 0000 ರೂ. ಮರುಪಾವತಿ ಮಾಡುವ ಒಪ್ಪಂದದ ಮೇಲೆ ಬ್ಯಾಂಕ್ ಸಾಲ ನೀಡಿತ್ತು. ಮೊದಲನೇ ಕಂತನ್ನು ಮಂಜುನಾಥ್ ಸರಿಯಾಗಿ ಪಾವತಿ ಮಾಡಿದ್ದರೂ ಎರಡನೇ ಕಂತಿನಲ್ಲಿ 8000 ರೂ. ಬಾಕಿಯಿತ್ತು. ಕಳೆದ ಮಂಗಳವಾರ ಬ್ಯಾಂಕ್ ಅಧಿಕಾರಿಗಳು ಮಂಜುನಾಥನ ಮನೆಗೆ ತೆರಳಿ ಅವನನ್ನು ಸಾರ್ವಜನಿಕರ ಎದುರೇ ಅವಮಾನ ಮಾಡಿದ್ದಲ್ಲದೇ ಟ್ರಾಕ್ಟರ್ನ್ನು ವಶಕ್ಕೆ ತೆಗೆದುಕೊಂಡರು.
ತೀವ್ರ ಅವಮಾನಿತನಾದ ಮಂಜುನಾಥ ತನ್ನ ಸಾವಿಗೆ ಬ್ಯಾಂಕ್ ಅಧಿಕಾರಿಗಳೇ ಕಾರಣ ಎಂದು ಪತ್ರ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ. ಸಾಲ ವಸೂಲಾತಿಗೆ ಬ್ಯಾಂಕಿನ ಕಿರುಕುಳದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರಾಜ್ಯ ರೈತ ಸಂಘದ ಅಧ್ಯಕ್ಷ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತರು ಪ್ರತಿಭಟನೆ ಹಮ್ಮಿಕೊಂಡು ಮೆರವಣಿಗೆಯಲ್ಲಿ ತೆರಳಿ ರಾಮವಿಲಾಸ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕಿಗೆ ಮುತ್ತಿಗೆ ಹಾಕಿದರು. ಐಸಿಐಸಿಐ ಬ್ಯಾಂಕಿನ ದೂಂಡಾವರ್ತನೆಯ ಕ್ರಮವನ್ನು ರೈತರು ಖಂಡಿಸಿ ಈಗ ಪ್ರತಿಭಟನೆಗಳಿಗೆ ಇಳಿದಿದ್ದಾರೆ.
|