ನಗರದ ಸೆಪ್ಪಿಂಗ್ ರಸ್ತೆಯ ನೆಹರೂಪುರದಲ್ಲಿರುವ ಮಹಾನಗರ ಪಾಲಿಕೆ ಪೌರ ಕಾರ್ಮಿಕರ ವಸತಿ ಸಮುಚ್ಚಯದಲ್ಲಿ ಸಂಭವಿಸಿದ ಕುಸಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಸಾಂತ್ವನ ಹೇಳಿ ಪರಿಹಾರವನ್ನು ಘೋಷಿಸಿದ್ದಾರೆ.
1987ನೇ ಇಸವಿಯಲ್ಲಿ ಈ ಸಮುಚ್ಚಯ ನಿರ್ಮಾಣಗೊಂಡಿದ್ದು ಗುತ್ತಿಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರನು ಈ ಕಟ್ಟಡವನ್ನು ಪಾಲಿಕೆಗೆ ಹಸ್ತಾಂತರ ಮಾಡಿರಲಿಲ್ಲ ಎಂಬ ವಿಷಯವೀಗ ಬೆಳಕಿಗೆ ಬಂದಿದೆ.
ಸಮುಚ್ಚಯದ ಕೆಲವು ಬ್ಲಾಕ್ಗಳನ್ನು ಮಾರಿ ಉಳಿದವನ್ನು ಆತ ಬಾಡಿಗೆಗೆ ನೀಡಿದ್ದ ಎಂಬ ಅಂಶ ತಿಳಿದುಬಂದಿದೆ. ಬಾಡಿಗೆ ಕೊಟ್ಟಾತನೂ ಯಾವಾಗಲೋ ಮೃತಪಟ್ಟಿದ್ದು, ಆತನ ಸಮುಚ್ಚಯದಲ್ಲಿ ವಾಸವಿದ್ದ ಕುಟುಂಬವೀಗ ಈ ದುರ್ಘಟನೆಗೆ ಬಲಿಯಾಗುವಂತಾಗಿದೆ.
ವಿಪರ್ಯಾಸವೆಂದರೆ ದುರ್ಘಟನೆ ಸಂಭವಿಸಿ ಒಂದು ಗಂಟೆ ಕಳೆದರೂ ಅಂಬುಲೆನ್ಸ್ ವಾಹನ ಬರಲಿಲ್ಲ. ಗಾಯಾಳುಗಳನ್ನು ಆಸ್ಪತ್ರೆ ತನಕ ತಂದರೂ ಅಲ್ಲಿ ವೈದ್ಯರಾಗಲೀ, ಜೀವರಕ್ಷಕ ಓಷಧಿಗಳಾಗಲೀ, ರಕ್ತವಾಗಲೀ ಇಲ್ಲದೆ ಸಂಬಂಧಿಕರ ಆಕ್ರೋಶ ಮೇರೆ ಮೀರಿತ್ತು.
ದುರ್ಘಟನೆಯ ವಿಷಯ ತಿಳಿಯುತ್ತಿದ್ದಂತೆ ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್, ಸಿ.ಎಮ್.ಇಬ್ರಾಹಿಂ, ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್, ಮಾಜಿ ಸಚಿವರಾದ ರೋಷನ್ಬೇಗ್, ಕೆ.ಜೆ.ಜಾರ್ಜ್ ಮೊದಲಾದವರು ಬೌರಿಂಗ್ ಆಸ್ಪತ್ರೆಗೆ ತೆರಳಿ ಮೃತರ ಸಂಬಂಧಿಗಳಿಗೆ ಸಾಂತ್ವನ ಹೇಳಿದ್ದಾರೆ.
|