ಮಹತ್ವಾಕಾಂಕ್ಷೀ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಧರ್ಮಸ್ಥಳದ ಸಮ್ಮೇಳನಾಧ್ಯಕ್ಷ ಎಲ್.ಎಸ್.ಶೇಷಗಿರಿರಾವ್, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪಾಟೀಲರನ್ನು ಬಾಜಾ ಬಜಂತ್ರಿಯೊಂದಿಗೆ ವೇದಿಕೆಗೆ ಕರೆದೊಯ್ಯುವ ಮೂಲಕ ನುಡಿಜಾತ್ರೆಗೆ ಮುನ್ನಡಿ ಬರೆಯಲಾಯಿತು.
ರಾಜ್ಯದ ಹಲವು ಮೂಲೆಗಳಿಂದಷ್ಟೇ ಅಲ್ಲದೇ ಹೊರನಾಡ ಕನ್ನಡಿಗರೂ ಈ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿದ್ದು ಸ್ಥಳೀಯರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಎಲ್ಲೆಲ್ಲೂ ಹರ್ಷೋದ್ಗಾರ, ರಾಜ್ಯೋತ್ಸವದ ಕಂಪನ್ನು ಮರು ನೆನಪಿಸುವ ವಾತಾವರಣ ಎದ್ದು ಕಾಣುತ್ತಿತ್ತು.
ಮುಂಬೈಯಿಂದ ಬಂದಿದ್ದ ಕನ್ನಡ ಕುಟುಂಬವೊಂದು ಅತ್ಯಂತ ಉತ್ಸಾಹದಿಂದ ಈ ಜಾತ್ರೆಯಲ್ಲಿ ಪಾಲ್ಗೊಂಡಿತ್ತು.
ಈ ಕುರಿತು ಕೇಳಿದಾಗ, ಕಳೆದ ತಿಂಗಳಷ್ಟೇ ರಾಜ್ಯೋತ್ಸವದ ಸವಿಯನ್ನು ಸವಿದಿದ್ದ ನಾವು ಇತ್ತೀಚೆಗಷ್ಟೇ ನಡೆದ ಆಳ್ವಾಸ್ ನುಡಿಸಿರಿಯಲ್ಲೂ ಪಾಲ್ಗೊಂಡಿದ್ದೆವು. ಅದಾದ ನಂತರ ಧರ್ಮಸ್ಥಳದ ಲಕ್ಷದೀಪೋತ್ಸವ ಮುಗಿಸಿಕೊಂಡು ಬಂದ ನಮಗೆ ಈಗ ಉಡುಪಿಯ ಈ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿದೆ. ಇದು ನಮ್ಮ ಸೌಭಾಗ್ಯ ಎಂದು ಕುಟುಂಬದ ಸದಸ್ಯರೆಲ್ಲ ಹೇಳುವಾಗ ಕನ್ನಡದ ಕುರಿತಾದ ಅವರ ಉತ್ಕಟಾಭಿಮಾನ ಎದ್ದು ಕಾಣುತ್ತಿತ್ತು.
ಇಂದು ಮಧ್ಯಾಹ್ನ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂಧ್ರ ಹೆಗ್ಗಡೆ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ.
|