ಉಡುಪಿಯಲ್ಲಿ ಇಂದು ಪ್ರಾರಂಭವಾಗಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಿತ್ಯೋತ್ಸವ ಕವಿಯೆಂದೇ ಖ್ಯಾತರಾದ ಪ್ರೊ.ಕೆ.ಎಸ್.ನಿಸಾರ್ ಅಹಮದ್ರವರು ಗೈರು ಹಾಜರಾಗಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.
ಸಮ್ಮೇಳನಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡುವಾಗ ವ್ಯಾಸರಾಯ ಬಲ್ಲಾಳರ ಬದಲಿಗೆ ಎಲ್.ಎಸ್.ಶೇಷಗಿರಿರಾಯರನ್ನು ಆಯ್ಕೆಮಾಡಿದ್ದಕ್ಕೆ ನಿಸಾರ್ ಅಸಮಾಧಾನಗೊಂಡಿದ್ದರು. ಈಗ ಅನಾರೋಗ್ಯದ ಕಾರಣವನ್ನು ಮುಂದೊಡ್ಡಿರುವ ನಿಸಾರ್ ಸಮ್ಮೇಳನಕ್ಕೆ ಹಾಜರಾಗಲು ಸಾಧ್ಯವಾಗದ ಕಾರಣ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪಾಟೀಲರಿಗೆ ತಮ್ಮ ಲಿಖಿತ ಭಾಷಣವನ್ನು ಕಳಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪ್ರತಿ ಸಮ್ಮೇಳನದಲ್ಲೂ ನಿಕಟಪೂರ್ವ ಅಧ್ಯಕ್ಷರು ಹಾಜರಾಗಿ ಭಾಷಣ ಮಾಡುವುದು ವಾಡಿಕೆ. ಅದರೆ ಈಗ ನಿಸಾರ್ ಗೈರುಹಾಜರಾಗುವುದರ ಮೂಲಕ ಈ ಸಂಪ್ರದಾಯವನ್ನು ಮುರಿದಂತಾಗಿದೆ.
|