ಜೆಡಿಎಸ್ ಬಂಡಾಯಗಾರ ಹಾಗೂ ಜಿಲ್ಲೆಯ ಪ್ರಭಾವಿ ರಾಜಕಾರಣಿ ಜಿ.ಟಿ. ದೇವೇಗೌಡ ಹಾಗೂ ಅವರ ಬೆಂಬಲಿಗರು ಈ ಹಿಂದೆ ತಿಳಿಸಿದಂತೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿನ ಜೆಡಿಎಸ್ ಪ್ರಾಬಲ್ಯಕ್ಕೆ ಪೆಟ್ಟು ಬಿದ್ದಂತಾಗಿದೆ.
ಇಲ್ಲಿನ ಟೌನ್ ಹಾಲ್ ಮುಂಭಾಗದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ತಮ್ಮ ಬೆಂಬಲಿಗ ಮಾಜಿ ಶಾಸಕರು, ನಗರ ಪಾಲಿಕೆ ಸದಸ್ಯರು, ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಬಿಜೆಪಿ ಸೇರಿದ್ದಾರೆ. ಜಿ.ಟಿ.ದೇವೇಗೌಡರ ಈ ಸೇರ್ಪಡೆಗೆ ರಾಜ್ಯದ ಬಿಜೆಪಿ ಉಸ್ತುವಾರಿ ಹೊತ್ತಿರುವ ಯಶವಂತ್ ಸಿನ್ಹಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಸದಾನಂದ ಗೌಡ ಸಾಕ್ಷಿಯಾದರು.
ಜೆಡಿಎಸ್ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲದೇ ಹೋದುದರಿಂದ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣನವರ ಕಿರುಕುಳ ಹೆಚ್ಚಾದುದರಿಂದ ಪಕ್ಷ ಬಿಡಬೇಕಾಯಿತು. ಜೆಡಿಎಸ್ ವರಿಷ್ಠರು ನುಡಿದಂತೆ ನಡೆಯದೇ ಇರುವುದೂ ಜೆಡಿಎಸ್ ಬಿಡಲು ಮತ್ತೊಂದು ಕಾರಣ ಎಂದು ಜಿ.ಟಿ.ದೇವೇಗೌಡ ಈ ಸಂದರ್ಭದಲ್ಲಿ ತಿಳಿಸಿದರು.
ಜಿ.ಟಿ.ಸೇರ್ಪಡೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬ್ಯಾನರ್ಗಳು, ಬಂಟಿಂಗ್ಗಳು, ಕಮಲದ ಬ್ಯಾನರ್ಗಳು ರಾರಾಜಿಸುತ್ತಿದ್ದುದು ವಿಶೇಷವಾಗಿತ್ತು. ಮಾಜಿ ಶಾಸಕ ಮಾರುತಿರಾವ್ ಪವಾರ್, ಯುವ ನಾಯಕ ಸಂತೋಷ್ ಸೇರಿದಂತೆ ನೂರಾರು ಮುಖಂಡರು ಜಿ.ಟಿ.ದೇವೇಗೌಡ ಅವರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡರು.
|