ಯಾವಾಗಲೂ ಗೆದ್ದೆತ್ತಿನ ಬಾಲ ಹಿಡಿಯುವ ಜಾಯಮಾನದ ಎಂ.ಪಿ.ಪ್ರಕಾಶ್ ಖಂಡಿತವಾಗಿ ಜೆಡಿಎಸ್ಗೆ ಬಂದೇ ಬರುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಗೇಲಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಜೆಡಿಯುನಲ್ಲಿದ್ದ ಪ್ರಕಾಶ್ ಜೆಡಿಎಸ್ ಗೆಲ್ಲುತ್ತದೆ ಎಂದು ತಿಳಿಯುತ್ತಿದ್ದಂತೆ ಇಲ್ಲಿಗೆ ಬಂದರು. ಈಗ ಯಾವ ಪಕ್ಷ ಗೆಲ್ಲುತ್ತದೆ ಎಂದು ನೋಡುತ್ತಿರಬೇಕು. ಆದರೆ ಜೆಡಿಎಸ್ಗೇ ಅವಕಾಶಗಳು ಹೆಚ್ಚಿವೆ ಎಂದು ಗೊತ್ತಾದ ಕೂಡಲೇ ವಾಪಸ್ ಬರುತ್ತಾರೆ ಎಂದು ನುಡಿದರು.
ಜೆಡಿಎಸ್ನಲ್ಲಿರುವಾಗ ಎಲ್ಲ ರೀತಿಯ ಅಧಿಕಾರ ಅನುಭವಿಸಿ ಈಗ ಪಕ್ಷ ಬಿಡುವಾಗ ಇದನ್ನು ಅಪ್ಪ-ಮಕ್ಕಳ ಪಕ್ಷ ಎಂದು ಅವರು ಟೀಕೆ ಮಾಡುವುದು ಸರಿಯಲ್ಲ. ಅವರು ಪಕ್ಷ ಬಿಡದಂತೆ ಮನವೊಲಿಸಲು ಕೊನೆಯವರೆಗೆ ಸಾಕಷ್ಟು ಪ್ರಯತ್ನಪಟ್ಟೆ. ಅದರೆ ಅವರು ಒಪ್ಪಲಿಲ್ಲ ಎಂದು ಮೆರಾಜುದ್ದೀನ್ ತಿಳಿಸಿದರು.
ರಾಜ್ಯದಲ್ಲಿ ಈಗಾಗಲೇ ಅಧಿಕಾರ ಸೂತ್ರ ತಮ್ಮ ಕೈನಲ್ಲೇ ಇದೆ ಎಂಬ ಭ್ರಮೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರು ತೇಲುತ್ತಿದ್ದಾರೆ. ಆ ಇಬ್ಬರಿಗೂ ನಿರಾಸೆಯಾಗಲಿದೆ. ಈ ಎರಡೂ ಪಕ್ಷಗಳೂ ಮುಂದೆ ಅಧಿಕಾರಕ್ಕೆ ಬರದಂತೆ ತಡೆಯಲು ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ನಮ್ಮ ಪಕ್ಷ ಕೈಗೊಳ್ಳಲಿದೆ. ಇದಕ್ಕಾಗಿ ಪಕ್ಷ ಸಂಘಟಿಸಲು ಸದ್ಯದಲ್ಲಿಯೇ ಮುಖಂಡರು ರಾಜ್ಯಾದ್ಯಂತ ಪ್ರವಾಸ ನಡೆಸಲಿದ್ದಾರೆ ಎಂದು ಪಟೇಲ್ ತಿಳಿಸಿದ್ದಾರೆ.
|