ಸ್ಪೀಡ್ ಗವರ್ನರ್ ಕಡ್ಡಾಯ ಆದೇಶವನ್ನು ಹೊರಡಿಸಿದ್ದ ಹೈಕೋರ್ಟ್ ತೀರ್ಪಿಗೆ ಸುಪ್ರಿಂಕೋರ್ಟ್ ಮತ್ತೊಮ್ಮೆ ತಡೆಯೊಡ್ಡಿದೆ. ಈ ಮೂಲಕ ಬಹುದಿನಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ವಿವಾದ ಸ್ವಲ್ಪ ಮಟ್ಟಿಗೆ ಬಗೆಹರಿದಂತಾಗಿದೆ.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ, ಲಾರಿ ಹಾಗೂ ಇತರ ಖಾಸಗಿ ವಾಹನ ಮಾಲೀಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಲಾರಿ ಹಾಗೂ ಇತರ ಖಾಸಗಿ ವಾಹನದ ಮಾಲೀಕರು ನಡೆಸಿದ್ದ ಪ್ರತಿಭಟನೆಗೆ ಫಲ ದೊರೆತಂತಾಗಿದೆ.
ಸುಪ್ರೀಂಕೋರ್ಟ್ ಈ ಕುರಿತಾದ ಅಂತಿಮ ತೀರ್ಪನ್ನು ನೀಡುವಂತೆ ಹೈಕೋರ್ಟ್ಗೆ ಆದೇಶ ನೀಡಿದ್ದು, ಸದ್ಯದಲ್ಲಿಯೇ ಅಂತಿಮ ತೀರ್ಪು ಟ್ರಕ್ ಹಾಗೂ ಲಾರೀ ಮಾಲೀಕರ ಪರವಾಗಿ ಹೊರಬೀಳುವ ಸಾಧ್ಯತೆಗಳಿವೆ ಎಂದು ಕರ್ನಾಟಕ ಲಾರಿ ಮಾಲೀಕರ ಸಂಘ ತಿಳಿಸಿದೆ.
ಟ್ರಕ್, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಹಾಗೂ ಖಾಸಗಿ ಬಸ್ಗಳು ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯಗೊಳಿಸುವಂತೆ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ, ಈ ವಾಹನ ಸಂಘಗಳ ಒಕ್ಕೂಟವು ಹೈಕೋರ್ಟ್ಗೆ ಮನವಿ ಸಲ್ಲಿಸಿತ್ತು. ಆದರೆ ಅದು ವಿಫಲವಾದಾಗ ಒಕ್ಕೂಟವು ಮುಷ್ಕರ ನಡೆಸಿತು. ಕೊನೆಗೆ ಈ ವಿವಾದ ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದು, ಫೆಬ್ರವರಿ 26ರಂದು ಸ್ಪೀಡ್ ಗವರ್ನರ್ ಅಳವಡಿಕೆಗೆ ತಡೆ ನೀಡಿತ್ತು. ಇಂದು ಕೋರ್ಟ್ ಅಂತಿಮ ತೀರ್ಪನ್ನು ಹೈಕೋರ್ಟ್ ನೀಡುವಂತೆ ಆದೇಶ ನೀಡಿದೆ. ಒಟ್ಟಾರೆಯಾಗಿ ಸರ್ಕಾರದ ವಿರುದ್ಧ ಲಾರೀ ಮಾಲೀಕರ ಒಕ್ಕೂಟಕ್ಕೆ ಸಂದ ಜಯ ಇದಾಗಿದೆ.
|