ಜೆಡಿಎಸ್ ಇಲ್ದೆ ಯಾರು ಸರ್ಕಾರ ರಚಿಸುತ್ತಾರೋ ನೋಡ್ತೀನಿ ಎಂದು ಹೇಳಿಕೆ ನೀಡಿರುವ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರ ಮಾತು ಬ್ಲಾಕ್ ಮೇಲ್ ಮತ್ತು ಮೋಸದ ನಡವಳಿಕೆಯನ್ನು ಬಿಂಬಿಸುತ್ತದೆ ಎಂದು ಬಿಜೆಪಿಯ ಹಿರಿಯ ಮುಖಂಡ ರಾಮಚಂದ್ರಗೌಡ ಕಟುವಾಗಿ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ಗೆ 'ಗಿಳಿಯು ಪಂಜರದೊಳಗಿಲ್ಲಾ' ಎಂಬ ಪರಿಸ್ಥಿತಿಯುಂಟಾಗಿದ್ದು, ಇದರಿಂದಾಗಿ ದೇವೇಗೌಡರು ಇಂತಹ ಹೇಳಿಕೆಯನ್ನು ನೀಡಿದ್ದಾರೆ. ಇದು ಅವರ ಅಸಹಾಯಕತೆಯನ್ನು ತೋರಿಸುತ್ತದೆ ಎಂದು ಲೇವಡಿ ಮಾಡಿದರು.
ದೇವೇಗೌಡರ ಇಂತಹ ಹೇಳಿಕೆಯಿಂದ ಜೆಡಿಎಸ್ ಮುಂದಿನ ಚುನಾವಣೆಯಲ್ಲಿ ಬಹುಮತ ಪಡೆಯುವುದಿಲ್ಲವೆನ್ನುವ ಸಂದೇಶವೂ ಮತದಾರರಿಗೆ ರವಾನೆಯಾಗಿದೆ ಎಂದು ಅವರು ತಿಳಿಸಿದರು.
ಕಳೆದ ವರ್ಷ ಬಿಜೆಪಿಗೆ ಮಾಡಿರುವ ಮೋಸ ಮತ್ತು ವಚನ ಭ್ರಷ್ಟತೆಗೆ ಬೇಸತ್ತು ಅನೇಕ ಜೆಡಿಎಸ್ ನಾಯಕರು ಪಕ್ಷ ತೊರೆದಿದ್ದಾರೆ. ಇಷ್ಟಾದರೂ ದೇವೇಗೌಡರು ಇನ್ನೂ ಪಾಠ ಕಲಿತಿಲ್ಲ ಎಂದು ಅವರು ತಿಳಿಸಿದರು.
|