ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಗ್ರನಾಯಕರುಗಳು ಸ್ಪರ್ಧಿಸದಂತೆ ಹೈಕಮಾಂಡ್ನಿಂದ ಆದೇಶ ಬಂದಿದೆ ಎನ್ನಲಾಗಿದ್ದು ಇದರಿಂದ ತಾವೇ ಮುಂದಿನ ಮುಖ್ಯಮಂತ್ರಿ ಎಂಬ ಕನಸಿನಲ್ಲಿ ತೇಲುತ್ತಿದ್ದ ಹಿರಿಯ ನಾಯಕರಿಗೆ ನಿರಾಸೆಯಾಗಿದೆ.
ಒಂದು ವೇಳೆ ಪಕ್ಷ ಚುನಾವಣೆಯಲ್ಲಿ ಬಹುಮತ ಗಳಿಸಿದರೆ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಮುಖ್ಯಮಂತ್ರಿ ಎಂದು ಒಂದು ವರ್ಗ ನಂಬಿದ್ದರೆ, ಎಸ್.ಎಂ.ಕೃಷ್ಣರನ್ನು ಮುಖ್ಯಮಂತ್ರಿ ಮಾಡಲೆಂದೇ ಈ ಬಾರಿ ರಾಜ್ಯಕ್ಕೆ ಕಳಿಸಲಾಗಿದೆ ಎಂದು ಮತ್ತೊಂದು ಗುಂಪು ಸಂಭ್ರಮಿಸುತ್ತಿತ್ತು.
ಈಗ ಮಹತ್ವದ ಬೆಳವಣಿಗೆಯೊಂದರಲ್ಲಿ ಹೈಕಮಾಂಡ್ ತಳೆದಿರುವ ಈ ನಿರ್ಧಾರದಿಂದಾಗಿ ಈ ಇಬ್ಬರು ನಾಯಕರಷ್ಟೇ ಅಲ್ಲದೆ ಧರಂಸಿಂಗ್, ವೀರಪ್ಪ ಮೊಯ್ಲಿ, ಜನಾರ್ಧನ ಪೂಜಾರಿ, ಮಾರ್ಗರೇಟ್ ಆಳ್ವರವರುಗಳು ಸ್ಪರ್ಧಿಸುವಂತಿಲ್ಲ ಎಂಬ ಅಂಶವೂ ಹೊರಬಿದ್ದಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಪಕ್ಷದಲ್ಲಿನ ಭಿನ್ನಮತ ನಿವಾರಣೆಗೆ ಹೈಕಮಾಂಡ್ ಈ ಕ್ರಮ ಕೈಗೊಂಡಿದೆ ಎಂದು ಪಕ್ಷದ ಒಂದು ಮೂಲ ತಿಳಿಸಿದ್ದರೆ, ಪಕ್ಷದಲ್ಲಿ ಯುವಶಕ್ತಿಗೆ ಹೆಚ್ಚು ಪ್ರಾಶಸ್ತ್ಯ ನೀಡುವ ಉದ್ದೇಶದಿಂದ ಹೈಕಮಾಂಡ್ ಈ ನಿಲುವು ತಳೆದಿದೆ ಎಂದು ಮತ್ತೊಂದು ವರ್ಗ ಅಭಿಪ್ರಾಯಪಟ್ಟಿದೆ. ಇದರಿಂದಾಗಿ ಖರ್ಗೆ, ಕೃಷ್ಣ ಮತ್ತು ಧರಂಸಿಂಗ್ ಅಭಿಮಾನಿಗಳು ಬೇಸರಗೊಳ್ಳಬಹುದು ಎಂಬ ಅಭಿಪ್ರಾಯವಿದ್ದರೂ ಚುನಾವಣೆಯಲ್ಲಿ ಕಾರ್ಯಕರ್ತರಂತೆ ದುಡಿಯಲು ಸ್ಪಷ್ಟ ಆದೇಶ ಬಂದಿರುವುದರಿಂದ ಅವರೆಲ್ಲರೂ ಅದನ್ನು ಅನುಸರಿಸಲೇಬೇಕಿದೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.
|