ಇತ್ತ ಬಿಜೆಪಿ ತನ್ನ ಪಟ್ಟಿ ಬಿಡುಗಡೆ ಮಾಡಿ ಸಂಚಲನೆ ಮೂಡಿಸಿದ್ದರೆ ಕಾದು ನೋಡುವ ತಂತ್ರ ಅನುಸರಿಸಿರುವ ಬಿಎಸ್ಪಿ ಸದ್ಯದಲ್ಲಿಯೇ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿಜಿಆರ್ ಸಿಂಧ್ಯಾರವರು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಎಲ್ಲಾ 224 ಕ್ಷೇತ್ರಗಳಲ್ಲೂ ಪಕ್ಷ ಸ್ಪರ್ಧಿಸಲಿದೆ ಹಾಗೂ ಎಲ್ಲಾ ಜಾತಿಯ ಅಭ್ಯರ್ಥಿಗಳಿಗೂ ಪ್ರಾಶಸ್ತ್ಯ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಹುಜನ ಹಿತಾಯ ಬಹುಜನ ಸುಖಾಯ ಎಂಬ ಧ್ಯೇಯವಾಕ್ಯದಲ್ಲಿ ನಂಬಿಕೆಯಿಟ್ಟು ಉತ್ತರ ಪ್ರದೇಶದಲ್ಲಿ ಅಧಿಕಾರ ಗ್ರಹಣ ಮಾಡುವಲ್ಲಿ ಯಶಸ್ವಿಯಾಗಿರುವ ಮಾಯಾವತಿಯವರು ಕರ್ನಾಟಕದಲ್ಲಿಯೂ ಇದೇ ತಂತ್ರವನ್ನು ಅನುಸರಿಸಲು ಮನಸ್ಸು ಮಾಡಿದ್ದಾರೆ. ಈ ನಿರ್ಧಾರದ ಒಂದು ಅಂಗವಾಗಿ ಕನಿಷ್ಠ ಪಕ್ಷ 20 ಮಂದಿ ಬ್ರಾಹ್ಮಣ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಲಾಗುವುದು ಎಂಬ ಸುದ್ದಿಗಳು ಹಬ್ಬಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಟಿಕೆಟ್ ವಂಚಿತರನೇಕರು ಬಿಎಸ್ಪಿಗೆ ನೆಗೆಯಲಿದ್ದಾರೆ ಎಂಬ ಸುದ್ದಿಗಳೂ ರಾಜಕೀಯ ಕಾರಿಡಾರ್ನಲ್ಲಿ ಹಬ್ಬಿವೆ.
ಕಳೆದ ಬಾರಿಯ ಚುನಾವಣೆಯಲ್ಲಿಯೇ ತನ್ನ ಇರುವಿಕೆಯನ್ನು ಸಾಬೀತುಪಡಿಸಿದ ಬಿಎಸ್ಪಿ, ಸ್ಥಾನಗಳನ್ನು ಗಳಿಸಲಿಲ್ಲವಾದರೂ ಕಾಂಗ್ರೆಸ್ ಪಕ್ಷಕ್ಕೆ ಬರಬೇಕಿದ್ದ ಶೇಕಡಾವಾರು ಮತಗಳನ್ನು ಕಸಿಯುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ ಪಕ್ಷದ ಧ್ಯೇಯವಾಕ್ಯದಲ್ಲಿ ಮಾರ್ಪಾಡಾಗಿರುವುದರಿಂದ ಬಿಎಸ್ಪಿ ಚಮತ್ಕಾರ ಮಾಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ಆದರೆ ಕಳೆದೊಂದು ದಶಕದಿಂದಲೂ ಬಿಎಸ್ಪಿಯನ್ನು ಕಟ್ಟುವಲ್ಲಿ ಶ್ರಮವಹಿಸಿದ್ದ ಗೋಪಾಲ್ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ್ದಾರೆ. ಸದ್ಯಕ್ಕೆ ಬಿಎಸ್ಪಿಗಿರುವ ಸ್ಟಾರ್ ವ್ಯಾಲ್ಯೂ ಎಂದರೆ ಸಿಂಧ್ಯಾ ಒಬ್ಬರೇ. ಅಧಿಕಾರ ಗ್ರಹಣವೆಂಬುದು ದೂರದ ಮಾತು, ಆದರೆ ಇತರ ಪಕ್ಷಗಳ ಮತಗಳು ಹಂಚಿಹೋಗುವಲ್ಲಿ ಇದು ಪಾತ್ರವಹಿಸಬಹುದು ಎಂಬ ಮಾತುಗಳು ಈಗಾಗಲೇ ಚಾಲ್ತಿಯಲ್ಲಿವೆ.
|