ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ನಡೆಸುತ್ತಿದ್ದ ಗ್ರಾಮವಾಸ್ತವ್ಯ ಹಾಗೂ ಜನತಾ ದರ್ಶನ ಕಾರ್ಯಕ್ರಮಗಳು ಅವರಿಗೆ ಒಂದು ಹಂತದ ಜನಪ್ರಿಯತೆಯನ್ನು ತಂದುಕೊಟ್ಟಿದ್ದವು.
ಸಮ್ಮಿಶ್ರ ಸರ್ಕಾರ ಬಿದ್ದ ನಂತರ ಜನತಾ ದರ್ಶನ ಕಾರ್ಯಕ್ರಮವನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್ ಮುಂದುವರಿಸಿಕೊಂಡು ಬಂದರು. ಬಡವರು, ಅಂಗವಿಕಲರು ಹೀಗೆ ವಿವಿಧ ಸ್ವರೂಪದ ನೊಂದ ಜನರ ನೋವುಗಳಿಗೆ ಅವರು ಸ್ಪಂದಿಸುತ್ತಿದ್ದುದರಿಂದ ದೂರದ ಊರುಗಳಿಂದಲೂ ಜನ ಬಂದು ರಾಜ್ಯಪಾಲರಿಗಾಗಿ ಸಾಲುಗಟ್ಟಿ ಕಾಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಜನತಾ ದರ್ಶನವನ್ನು ನಡೆಸಲಾಗುತ್ತಿತ್ತು.
ಆದರೆ ಈ ಸಾಲುಗಳೀಗೀಗ ಕತ್ತರಿ ಬಿದ್ದಿದೆ. ಚುನಾವಣೆಗಳು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯುವವರೆಗೆ ಜನತಾದರ್ಶನ ನಡೆಸಬಾರದೆಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಇದು ಚುನಾವಣಾ ನೀತಿ ಸಂಹಿತೆಗೆ ವಿರೋಧವಾಗಿದ್ದರಿಂದ ಇದನ್ನು ನಡೆಸದಂತೆ ಆದೇಶಿಸಲಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ರಾಜ್ಯಪಾಲರು ಮುಖ್ಯಮಂತ್ರಿಗಳ ರೀತಿಯಲ್ಲಿಯೇ ಕಾರ್ಯನಿರ್ವಹಿಸುವುದರಿಂದ ಮತದಾರರು ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಜನತಾದರ್ಶನ ನಡೆಸಬಾರದೆಂದು ಆಯೋಗ ಸ್ಪಷ್ಟಪಡಿಸಿದೆ.
ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮನವಿಗಳು ಬರುತ್ತಿರುವುದರಿಂದ ಇದು ಮತದಾರರಿಗೆ ಯಾವುದೇ ಪ್ರಭಾವ ಬೀರುವುದಿಲ್ಲ. ಆದ್ದರಿಂದ ಜನತಾದರ್ಶನ ನಡೆಸಲು ಅನುಮತಿ ನೀಡಬೇಕೆಂದು ರಾಜಭವನ ಕೋರಿತ್ತು ಎನ್ನಲಾಗಿದೆ.
|