ರಾಜ್ಯದಲ್ಲಿ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಭಾರೀ ಪ್ರಮಾಣದಲ್ಲಿ ಅಧಿಕಾರಿಗಳ ವರ್ಗಾವಣೆ ನಡೆದಿರುವುದನ್ನು ಗಮನಿಸಿದರೆ ಮುಂಬರುವ ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆಯುವುದು ಅನುಮಾನ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ ಆಡಳಿತ ಯಂತ್ರ ಸ್ಥಗಿತಗೊಂಡಿರುವುದೇ ಅಲ್ಲದೇ ರಾಜ್ಯಪಾಲರ ಹುದ್ದೆಯನ್ನು ಕಾಂಗ್ರೆಸ್ಸಿಗರು ದುರ್ಬಳಕೆ ಮಾಡಿಕೊಳ್ಳುತ್ತಿರುವುದೂ ತಮ್ಮ ಅರಿವಿಗೆ ಬಂದಿದೆ ಎಂದು ನುಡಿದರು.
ತಮಗೆ ಬೇಕಾದ ಅಧಿಕಾರಿಗಳನ್ನು ತಮಗೆ ಅನುಕೂಲವಾಗುವ ಕ್ಷೇತ್ರದಲ್ಲಿ ಹಾಕಿಸಿಕೊಳ್ಳುವಷ್ಟರ ಮಟ್ಟಿಗೆ ಅಧಿಕಾರದ ದುರ್ಬಳಕೆ ನಡೆಯುತ್ತಿದೆ. ಮೈಸೂರಿನಲ್ಲಿ ಕಾಂಗ್ರೆಸ್ ಮುಖಂಡ ತನ್ವೀರ್ ಸೇಠ್ ಪ್ರಕರಣದಲ್ಲಿ ಯಾವುದೇ ಪ್ರಕರಣ ಕೈಗೊಳ್ಳದ ಪೊಲೀಸರು ವಿನಾಕಾರಣ ಅಲ್ಲಿನ ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಗೌಡರು ಈ ಸಂದರ್ಭದಲ್ಲಿ ಆರೋಪಿಸಿದರು.
ಈ ಬಗೆಯ ಕಿರುಕುಳಕ್ಕೆ ಕುಮ್ಮಕ್ಕು ನೀಡುತ್ತಿರುವ ನಾಯಕರು ಯಾರೆಂದು ನನಗೆ ಗೊತ್ತಿದೆ. ಅದನ್ನು ಈ ಸಂದರ್ಭದಲ್ಲಿ ಹೇಳುವುದಿಲ್ಲ ಎಂದು ನುಡಿದ ಗೌಡರು, ಇದಕ್ಕೆಲ್ಲಾ ಜಗ್ಗುವ ಆಸಾಮಿ ನಾನಲ್ಲ ಎಂದು ಗುಡುಗಿದ್ದೇ ಅಲ್ಲದೇ, ಚುನಾವಣಾ ನೀತಿ ಸಂಹಿತೆಯಲ್ಲಿನ ಉಲ್ಲಂಘನೆಯನ್ನು ತಮ್ಮ ಪಕ್ಷವು ಚುನಾವಣಾ ಆಯೋಗದ ಗಮನಕ್ಕೆ ತರಲಿದೆ ಎಂದು ತಿಳಿಸಿದರು.
|