ಭಾರತೀಯ ಜನತಾ ಪಕ್ಷಕ್ಕೆ ಈಗ ಯಾರದೂ ಹಂಗು ಬೇಕಿಲ್ಲ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ದೇವೇಗೌಡರ ಇತ್ತೀಚೆಗಿನ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ರಾಜ್ಯಪಾಲರ ಆಡಳಿತ ವೈಖರಿಯನ್ನು ವಿರೋಧಿಸಿ ಲಿರಾಜ್ಯಪಾಲ್ ಹಟಾವೋ, ಕರ್ನಾಟಕ್ ಬಚಾವೋಳಿ ಚಳವಳಿಯನ್ನು ಹಮ್ಮಿಕೊಳ್ಳುವುದಾಗಿ ನಿನ್ನೆಯಷ್ಟೇ ಚಿತ್ರದುರ್ಗದಲ್ಲಿ ಹೂಂಕರಿಸಿದ್ದ ಯಡಿಯೂರಪ್ಪ ಶನಿವಾರ ಜೆಡಿಎಸ್ ವರಿಷ್ಠ ದೇವೇಗೌಡರ ವಿರುದ್ಧ ಕಿಡಿಕಾರಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು ತಮ್ಮ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಲು ವೇದಿಕೆಯನ್ನು ಬಳಸಿಕೊಂಡರು. "ಜೆಡಿಎಸ್ ಪಕ್ಷದ ನೆರವಿಲ್ಲದೆ ಅದ್ಯಾವ ಮಹಾನುಭಾವರು ಸ್ವತಂತ್ರವಾಗಿ ಸರ್ಕಾರ ರಚಿಸ್ತಾರೋ ನೋಡ್ತೀನಿ" ಎಂಬ ದೇವೇಗೌಡರ ಹೇಳಿಕೆಗೆ ಯಡಿಯೂರಪ್ಪ ಖಾರವಾಗಿ ಪ್ರತಿಕ್ರಿಯಿಸಿದರು.
ಸಮ್ಮಿಶ್ರ ಸರ್ಕಾರ ನಡೆಸುವಾಗಿನ ಅವಧಿಯಲ್ಲಿ ಹಣಕಾಸು ಸಚಿವರಾಗಿ ತಾವು ಮಾಡಿದ ಕೆಲಸವೇನು ಎಂಬುದು ಇಡೀ ರಾಜ್ಯಕ್ಕೇ ಗೊತ್ತಿದೆ. ಸರ್ಕಾರಕ್ಕೆ ಕಂಟಕವಾಗಿದ್ದವರು ಯಾರು ಎಂಬ ಬಗ್ಗೆಯೂ ಸಹ ಜನರಿಗೆ ಅರಿವಿದೆ. ಆದ್ದರಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನ ಸ್ಪಷ್ಟ ಬಹುಮತ ನೀಡಲಿದ್ದಾರೆ ಎಂದು ಯಡಿಯೂರಪ್ಪ ಈ ಸಂದರ್ಭದಲ್ಲಿ ನುಡಿದರು.
ಸಮಾವೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತು ಯಡಿಯೂರಪ್ಪ ಅಭಿಮಾನಿಗಳ ಬಳಗಕ್ಕೆ ಅವರ ಒಂದೊಂದು ಮಾತು ಹುಚ್ಚೆಬ್ಬಿಸುತ್ತಿದ್ದವು. ಅವರು ತಮ್ಮದೇ ಜಿಲ್ಲೆಯವರು ಎಂಬುದರ ಜೊತೆಗೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪಕ್ಷದ ವತಿಯಿಂದ ಬಿಂಬಿತಗೊಂಡಿರುವುದು ಕಾರ್ಯಕರ್ತರ ಹೆಚ್ಚಿನ ಉತ್ಸಾಹಕ್ಕೆ ಕಾರಣವಾಗಿತ್ತು.
|