ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನತೆಗೆ ಸ್ಥಿರ ಹಾಗೂ ಸಿದ್ದಾಂತದೊಂದಿಗೆ ರಾಜಿಯಾಗದ ಪಕ್ಷದ ಅಗತ್ಯವಿದೆ, ಅದು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಕಪಿಲ್ ಸಿಬಲ್ ಹೇಳದ್ದಾರೆ.
ಸಿದ್ದಾಂತಗಳು ಹಾಗೂ ಮನಸ್ಸುಗಳನ್ನು ಅರಿಯದೆ ಅಧಿಕಾರ ಹಂಚಿಕೊಂಡಿರುವ ಕುರಿತು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯದ ಜನತೆಗೆ ವಿವರಿಸಬೇಕು ಎಂದು ಸಿಬಲ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸೇರಿ ಸರಕಾರ ರಚಿಸಿಕೊಂಡಿದ್ದು ಯಾವುದೇ ತತ್ವ, ಸಿದ್ದಾಂತದ ತಳಹದಿ ಮೇಲಲ್ಲ. ಮದುವೆಯಾದಾಗ ವರ್ಣರಂಜಿತ ಹೇಳಿಕೆಗಳನ್ನು ಕೊಟ್ಟು ಬಳಿಕ ವಿಚ್ಛೇದನದ ಸಮಯದಲ್ಲಿ ಪರಸ್ಪರ ಎರಡು ಪಕ್ಷಗಳು ಟೀಕಿಸಿದ್ದನ್ನು ಜನತೆ ಇನ್ನು ಮರೆತಿಲ್ಲ ಎಂದು ತಿಳಿಸಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯುವುದು ಬಹುತೇಕ ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಒಂದು ವೇಳೆ ಸಮ್ಮಿಶ್ರ ಸರ್ಕಾರದ ವಾತಾವರಣ ನಿರ್ಮಾಣವಾದರೆ ಜೆಡಿಎಸ್ ಜೊತೆ ಕೈಜೋಡಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆ ಕುರಿತು ಮಾತನಾಡಿದ ಸಿಬಲ್, ಚುನಾವಣೆಯ ಮೇಲೆ ಬೆಲೆ ಏರಿಕೆ ಪರಿಣಾಮ ಬೀರುವುದಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ದರಗಳು ಗಗನಕ್ಕೇರಿರುವುದೇ ಬೆಲೆ ಏರಿಕೆಗೆ ಕಾರಣವಾಗಿರುವುದೇ ಹೊರತು, ಇದಕ್ಕೆ ಯುಪಿಎ ಸರ್ಕಾರ ಜವಾಬ್ದಾರಿಯಲ್ಲ ಎಂದು ತಿಳಿಸಿದರು.
|