ಚುನಾವಣೆಯ ದಿನ ಹತ್ತಿರ ಬರುತ್ತಿರುವಂತೆ ಪಕ್ಷದಲ್ಲಿ ಅತೃಪ್ತರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ರಾಜ್ಯ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಟಿಕೆಟ್ ಹಂಚಿಕೆ ಪ್ರಕ್ರಿಯೆ ಅಸಮರ್ಪಕವಾಗಿದ್ದು ಹಣದ ಥೈಲಿ ತರುವವರಿಗೆ ಮಾತ್ರ ಟಿಕೆಟ್ ಹಂಚಲಾಗುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಒಂದು ಗುಂಪು ದೆಹಲಿಯ ವರಿಷ್ಠರಿಗೆ ದೂರು ನೀಡಲು ನಿರ್ಧರಿಸಿದೆ.
ಮೊದಲ ಪಟ್ಟಿಯಲ್ಲಿದ್ದ ಹೆಸರುಗಳು ಬದಲಾಗಿರುವ ಹಿನ್ನೆಲೆಯಲ್ಲಿ ಭಿನ್ನಮತ ಮತ್ತೊಂದು ಬಾರಿ ಸ್ಫೋಟಗೊಂಡಂತಾಗಿದೆ. ಅದರಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ನಟರಾಜುರವರದ್ದು. ಜಯನಗರ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಅವರು ನಾಯಕರ ಬಗ್ಗೆ ಅಸಮಾಧಾನಗೊಂಡು ಈಗ ಬಂಡಾಯ ಅಭ್ಯರ್ಥಿಯಾಗಿ ನಿಲ್ಲಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ತಮ್ಮ ಬೆಂಬಲಿಗರೊಂದಿಗೆ ಒಂದು ಸುತ್ತಿನ ಚರ್ಚೆ ನಡೆಸಿರುವ ನಟರಾಜ್, ಒಂದು ವೇಳೆ ಜೆಡಿಎಸ್ ಅಥವಾ ಕಾಂಗ್ರೆಸ್ನಿಂದ ಬಿ ಫಾರಂ ಸಿಕ್ಕಿದರೂ ತ್ಯಜಿಸಿ ಜಯನಗರದಿಂದ ಬಂಡಾಯ ಅಭ್ಯರ್ಥಿಯಾಗಿಯೇ ಸ್ಪರ್ಧಿಸಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಮೊದಲ ಹಂತದ ಚುನಾವಣೆಯ ಅಭ್ಯರ್ಥಿಗಳ ಪೈಕಿ ಇನ್ನೂ 29 ಮಂದಿಯ ಹೆಸರು ಅಂತಿಮವಾಗಬೇಕಿದ್ದು, ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳಿಂದ ಬೇಸರಗೊಂಡಿರುವ ಅನಂತ್ ಕುಮಾರ್ ಪಕ್ಷದ ವರಿಷ್ಠ ಎಲ್.ಕೆ.ಅಡ್ವಾಣಿಯವರಿಗೆ ದೂರು ಸಲ್ಲಿಸಲಿದ್ದಾರೆಂದು ತಿಳಿದುಬಂದಿದೆ.
|