ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆಯು ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದ್ದು ಪಟ್ಟಿಯಲ್ಲಿ ದಿನಕ್ಕೊಬ್ಬರ ಹೆಸರುಗಳು ಕೇಳಿ ಬರುತ್ತಿವೆ.
ಕಾಂಗ್ರೆಸ್ ಹಿರಿಯ ಮುಖಂಡರುಗಳಾದ ಟಿ.ಬಿ. ಜಯಚಂದ್ರ, ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್ ಹೆಸರುಗಳು ಈ ಮೊದಲು ಕೇಳಿ ಬಂದಿದ್ದು, ಈಗ ಈ ಪಟ್ಟಿಗೆ ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಅವರ ಹೆಸರು ಸೇರ್ಪಡೆಯಾಗಿದೆ.
ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆಯಿಂದ ತೆರವಾದ ಈ ಸ್ಥಾನಕ್ಕೆ ಇನ್ನೂ ನೇಮಕ ಮಾಡಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಈ ಸ್ಥಾನವೆಂದು ಹೇಳಲಾಗಿತ್ತಾದರೂ ಅವರು ಪಕ್ಷದ ಮೇಲೆ ಮುನಿಸಿಕೊಂಡಿದ್ದು, ಬೇರೆ ಯೋಜನೆ ಹಾಕಿಕೊಂಡಿದ್ದಾರೆನ್ನಲಾಗಿದೆ.
ಈ ಮಧ್ಯೆ, ಮೂಲ ಹಾಗೂ ವಲಸಿಗ ಕಾಂಗ್ರೆಸಿಗರ ನಡುವೆ ನಡೆದ ಮಹಾಸಮರದ ಬಳಿಕ ಈ ಸ್ಥಾನವನ್ನು ಯಾರಿಗೆ ಕೊಟ್ಟರೆ ಸೂಕ್ತ ಎಂಬುದು ಇನ್ನು ನಿರ್ಧಾರವಾಗಿಲ್ಲ. ಸ್ವತಃ ಹೈಕಮಾಂಡ್ ಈ ಬಗ್ಗ ತಲೆ ಕೆಡಿಸಿಕೊಂಡಿದೆ. ಹಲವು ಕಾರಣಗಳಿಂದ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಇವೆಲ್ಲವನ್ನು ಬಗೆಹರಿಸಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂಬುದು ಹೈಕಮಾಂಡ್ ಅಭಿಪ್ರಾಯಿಸಿದೆ ಎನ್ನಲಾಗಿದೆ.
|