ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಲ್ಲಿ 100 ಎಕರೆ ಪ್ರದೇಶದಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಿಸುವ ಯೋಚನೆ ಇದೆ ವಸತಿ ಹಾಗೂ ಮುಜರಾಯಿ ಸಚಿವ ಕೃಷ್ಣಯ್ಯ ಶೆಟ್ಟಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಜನಸಾಮಾನ್ಯರಿಗೆ ಅನುಕೂಲವಾದ ದರದಲ್ಲಿ ಈ ವಸತಿಗೃಹಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ಗೃಹಮಂಡಳಿ ಪ್ರತಿ ತಾಲೂಕು ಕೇಂದ್ರಗಳಲ್ಲಿ 100 ಎಕರೆ ಜಮೀನನ್ನು ಅಭಿವೃದ್ದಿಪಡಿಸಲಿದೆ. ಜಿಲ್ಲಾ ಕೇಂದ್ರಗಳಲ್ಲಿ 100 ಮನೆ ನಿರ್ಮಾಣ ಯೋಜನೆ ಜಾರಿಗೊಳಿಸಿದ ನಂತರ ತಾಲೂಕು ಕೇಂದ್ರಗಳಲ್ಲೂ ಇದೇ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂಬ ಯೋಚನೆ ಇದೆ ಎಂದು ತಿಳಿಸಿದರು.
ಯೋಜನೆಗೆ ರೈತರಿಂದ ಜಮೀನು ಸ್ವಾಧೀನಪಡಿಸಿಕೊಳ್ಳುವಾಗ ಬಿಡಿಎ ಮಾದರಿಯಲ್ಲೇ ಶೇ.35ರಿಂದ 40ರಷ್ಟು ಅಭಿವೃದ್ದಿಪಡಿಸಿದ ಜಮೀನನ್ನು ರೈತರಿಗೆ ನೀಡಬೇಕೆಂಬ ಚಿಂತನೆ ನಡೆಸುತ್ತಿದ್ದೇವೆ. ಗೃಹಮಂಡಳಿಯ ವಸತಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿ ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಗುಣಮಟ್ಟ ಮಾಪನದ ಸಂಸ್ಥೆಗಳಿಂದ ಪರೀಶೀಲನೆ ನಡೆಸಿ ನಂತರ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಲಾಗುವುದು ಎಂದು ಅವರು ವಿವರಿಸಿದರು.
|