ಮದುವೆಗೆ ಒತ್ತಾಯಿಸಿದ ವಾಯುಪಡೆ ಏರ್ ಮನ್ ಒಬ್ಬರು ಒಲ್ಲೆ ಎಂದಿದ್ದಕ್ಕಾಗಿ ಕಾನೂನು ವಿದ್ಯಾರ್ಥಿನಿ ಮೇಲೆ ಆಸಿಡ್ ಎರಚಿ ಪರಾರಿಯಾದ ಘಟನೆ ಇಲ್ಲಿನ ಹಲಸೂರು ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಆಸಿಡ್ ದಾಳಿಗೆ ತುತ್ತಾದ ಕೇರಳದ ತಿರುವನಂತಪುರದ ಯುವತಿ ಕಾರ್ತೀಕಾ (22) ಮುಖ ಎದೆಯ ಭಾಗ, ಕೈಕಾಲುಗಳು ಸುಟ್ಟು ಹೋಗಿವೆ.
ಈಕೆ ನಗರದ ಬಿಷಪ್ ಕಾಟನ್ ಕಾನೂನು ಕಾಲೇಜಿನಲ್ಲಿ ಐದನೇ ವರ್ಷದ ಎಲ್ಎಲ್ಎಂ ವ್ಯಾಸಂಗ ಮಾಡುತ್ತಿದ್ದಳು. ಆಸಿಡ್ ದಾಳಿ ನಡೆಸಿದಾತ ವಾಯುಸೇನಾ ನೌಕರ ರಾಕೇಶ್ (30). ಮಂಗಳವಾರ ಆಕೆ ತಂಗಿದ್ದ ಟ್ರಿನಿಟಿ ಹಾಸ್ಟೆಲ್ನಿಂದ ಸ್ನೇಹಿತೆ ಜೊತೆ ಕಾಲೇಜಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬರುತ್ತಿದ್ದಾಗ ಬೈಕಿನಲ್ಲಿ ಬಂದ ಆತ ಈ ದುಷ್ಕೃತ್ಯ ಎಸಗಿ ಪರಾರಿಯಾಗಿದ್ದಾನೆ.
ತಕ್ಷಣ ಅಕ್ಕಪಕ್ಕದವರು ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿ, ಈಕೆಯನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಜಸ್ಥಾನ ಘಟಕದಲ್ಲಿ ಏರ್ಮನ್ ಆಗಿದ್ದ ರಾಕೇಶ್ ಕೆಲ ತಿಂಗಳ ತರಬೇತಿಗಾಗಿ ನಗರಕ್ಕೆ ಬಂದಿದ್ದ. ಈಕೆಯ ಪರಿಚುವಾದ ಸ್ವಲ್ಪ ದಿನದಲ್ಲೇ ಆತ ರಾಜಸ್ಥಾನದಿಂದ ಬೆಂಗಳೂರಿಗೆ ವರ್ಗಾವಣೆಯಾದ. ಈಕೆಗಾಗಿ ದಿನವೂ ಟ್ರಿನಿಟಿ ವೃತ್ತದ ಹಾಸ್ಟೆಲ್ಗೆ ಬಂದು ಕಾಯುತ್ತಿದ್ದ.
ಪ್ರತಿದಿನ ಮದುವೆಗಾಗಿ ಪೀಡಿಸುತ್ತಿದ್ದ. ಆದರೆ ಕಾರ್ತಿಕಾ ಒಪ್ಪಲಿಲ್ಲ. ಆಕೆಯ ಪಾಲಕರಲ್ಲೂ ಮದುವೆ ವಿಷಯ ಪ್ರಸ್ತಾಪಿಸಿದ್ದ. ಆದ್ರೆ ಅವರೂ ಒಪ್ಪದಿದ್ದಾಗ ಈ ದುಷ್ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾರ್ತಿಕಾ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ಶೇ 40 ರಷ್ಟು ದೇಹ ಸುಟ್ಟಿದೆ. ಪೊಲೀಸರು ಆರೋಪಿಗಾಗಿ ಶೋಧ ಮುಂದುವರಿಸಿದ್ದಾರೆ. |