ರಾಜ್ಯದ ಐದು ಪ್ರಮುಖ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬಿಜೆಪಿ ಸರ್ಕಾರ ತನ್ನ ಬಜೆಟ್ನಲ್ಲಿ ಘೋಷಿಸಿದ್ದಂತೆ ಶಿವಮೊಗ್ಗ, ಗುಲ್ಬರ್ಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರು ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಐಟಿ ಪಾರ್ಕ್ಗೆ ಈಗಾಗಲೇ ಚಾಲನೆ ದೊರಕಿದೆ. ನ.1ರಂದು ಶಿವಮೊಗ್ಗದಲ್ಲಿ ಪಾರ್ಕ್ ಸ್ಥಾಪನೆ ಕಾರ್ಯ ಆರಂಭಿಸಲಾಗುವುದು. ಇದಕ್ಕಾಗಿ 25 ಎಕರೆ ಭೂಮಿ ಗುರುತಿಸಲಾಗಿದೆ. ಆ ಜಾಗದಲ್ಲಿ ಐಟಿ ವಿಶೇಷ ವಿತ್ತ ವಲಯ ತಲೆ ಎತ್ತಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ದೇವನಹಳ್ಳಿ ವಿಮಾನ ನಿಲ್ದಾಣ ಸಮೀಪ ಖಾಸಗಿ ಸಹಭಾಗಿತ್ವದ ಐಟಿ ಪಾರ್ಕ್ ಸ್ಥಾಪನೆಯಾಗಲಿದೆ. ಈ ಎಲ್ಲಾ ಐಟಿ ಪಾರ್ಕ್ಗಳು ಕಾಮಗಾರಿ ಆರಂಭಗೊಂಡ 20 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ನಗರದಲ್ಲಿ ನ.6ರಿಂದ 9ರವರೆಗೆ ಐಟಿ ಮೇಳ ಕೂಡಾ ನಡೆಯಲಿದೆ. ಜಾಗತಿಕ ಮಟ್ಟದ ಕಂಪೆನಿಗಳು ಸೇರಿದಂತೆ ದೇಶದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಈ ವರ್ಷದ ಐಟಿ ಮೇಳದಲ್ಲಿ ಪಾಲ್ಗೊಳ್ಳಲಿವೆ. ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಹೊಸ ಸವಾಲುಗಳ ಬಗ್ಗೆ ಮೇಳದಲ್ಲಿ ಚರ್ಚೆ ನಡೆಯಲಿದೆ. |